Thursday, March 30, 2017

ಕೆಂಪು ದೀಪದ ಸುತ್ತ ತೇಲಿ ಬರುವ ಮಂದ ಗೀತ



ಕೆಂಪು ದೀಪದ ಮುಂದೆ ಏದುಸಿರು ಬಿಡುತ್ತ ಕವಿತೆಗಳು ನಿಲ್ಲುತ್ತವೆ. ಒಂದರ ಪಕ್ಕ ಇನ್ನೊಂದು. ಇನ್ನೊಂದರ ಹಿಂದೆ ಮತ್ತೊಂದು. ಮಳೆಗಾಲದ ಅಣಬೆಗಳು ಮುಗಿಲಿನಡಿಯ ಮಣ್ಣಿನ ಕವಿತೆಗಳು. ಕನಸುಗಳ ಪಲ್ಲಕ್ಕಿ. ಕೆಲವು ಹಗುರ ಹಲವು ಭಾರ.

ಸಿಗ್ನಲ್ಲಿನ ಬುಡಕ್ಕೆ ಜನಗಳನ್ನು ಹೊತ್ತು ತರುತ್ತಿವೆ ಗಾಡಿಗಳು, ಹೊರಟಿದ್ದು ಎಲ್ಲಿಗೋ? ನಿಂತಿದ್ದು ಮಾತ್ರ ಇಲ್ಲಿ. ಸೇರುವ ಮುನ್ನ ನಿಲ್ಲಲೇಬೇಕು. ಕೆಂಪು ದೀಪದ ಮುಂದೆ ಎಲ್ಲವೂ ಸ್ಥಗಿತ, ಹಿಂದೆ ಹಿಂದೆ ನೋಡಿದಷ್ಟು ಮತ್ತೊಂದಿಷ್ಟು, ಪುಳಪುಳನೆ ಹುತ್ತದೊಳಗಿನಿಂದ ಹೊರಬಿದ್ದ ಗೆದ್ದಲು. ಹೊಸ ಮಳೆಯ ಹಸಿ ಮಣ್ಣಿಗೆ ಹಾತೆಗಳು ಹೊರಬಿದ್ದಿವೆ. ಹೊರಹೋಗಲು ಕಿಟಕಿಗಳಿವೆ, ಒಳಬರಲು ಬಾಗಿಲುಗಳಿಲ್ಲ.

ದೀಪದೆದುರಿನಲ್ಲಿ ಅಸಹಾಯಕ ಆತಂಕ, ಕೋಪ, ಧಾವಂತ, ನಿತ್ಯ ನಿರಂತರ ಕಾತುರ. ಕಳೆದುಹೋದ ಎಲ್ಲರೊಳಗಿನ ಕವಿತೆ. ಕಳೆದುಹೋದ ಬಗ್ಗೆ ಅರಿವೆಲ್ಲಿ? ಕಳೆದುಕೊಂಡದ್ದಾದರೂ ಏನು? ಬದಲಿಗೆ ಗಳಿಸಿದ್ದು ಸಾಕಷ್ಟಿದೆಯಲ್ಲ. ಎಕ್ಸ್ ಚೇಂಚ್ ಕೊಡುಗೆಯಲ್ಲಿ ಭಾವನೆಗಳನ್ನು ಕೊಳ್ಳುವಂತಿದ್ದರೆ ಒಳ್ಳೆಯದಿತ್ತು.

ಅರವತ್ತು ಸೆಕೆಂಡುಗಳ ಸಿಗ್ನಲ್ಲು, ಕವಿತೆಗಳನ್ನಾದರೂ ಕಳೆದೆವು ಕಾಲವನ್ನಲ್ಲ. ಸೆಕೆಂಡು, ನಿಮಿಷ, ತಾಸು, ದಿನ, ವಾರ, ತಿಂಗಳು, ವರುಷ , ದಶಕ , ಜನನ, ಮರಣ. ಇಪ್ಪತ್ನಾಲ್ಕು ಘಂಟೆಗಳು. ಅಪ್ಪ-ಅಮ್ಮ, ಹೆಂಡತಿ ಮಗ ಮಗಳು, ಗೆಳೆಯ. ಯಾರಿಗೆಷ್ಟು ಕೊಡುವದು? ಭಾಗಾಕಾರ ಕಲಿಸಿದ ಗುರುಗಳು ರಿಟೈರ್ ಆಗಿ ಎಷ್ಟು ದಿನಗಳಾದವು?

ತಿರುಗುವ ಚಕ್ರ. ಬಣ್ಣ ಮಾಸಿದ ಬೈಕ್ ಮೇಲೆ ಕೂತವನು ನೆಲಕ್ಕೆ ಒಂದು ಕಾಲನ್ನು ಊರಿದ್ದಾನೆ. ಕಾಲು ಸಿಗುವಷ್ಟರಲ್ಲೆ ಬ್ಯಾಲೆನ್ಸ್ ಮಾಡಬೇಕು. ಬಲಕ್ಕೆ ಸರಿಯಾದರೆ ಎಡಕ್ಕೆ ಕಡಿಮೆ. ಎಡಕ್ಕೆ ಸಮವಾದರೆ ಬಲಕ್ಕೆ ಕಡಿಮೆ. ಮಧ್ಯ ಕೂತವನು ಹೊಂದಿಸಲೇಬೇಕು. ಊರಿಗೆ ಕೊನೆಯ ಬಾರಿ ಹಣ ಕಳುಹಿಸಿದ ತಾರೀಖು ಯಾವಾಗ?

ಸಾಲುಗಳ ಕಂಪನಿಯ ಕ್ಯಾಬುಗಳು. ಯಾವ ಪಾಳಿಯ ಜನರಿವರು? ಹಾಡು ಕೇಳುತ್ತ ಒಳಗೆ ಕೂತವರ ಕಿವಿಯಲ್ಲಿ ಮಧುರ ಗೀತ. ಮರೆತು ಹೋಗುವಷ್ಟು ಕಾಲವಾಗಿದೆ ಯಾವತ್ತು ಕೇಳಿದ್ದು ಸುತ್ತಲಿನ ಪ್ರಾಚೀನ ಸಂಗೀತ? ಓಟ, ಹೆಜ್ಜೆಯ ಸಪ್ಪಳದಲ್ಲಿ ನಡಿಗೆಗೆಲ್ಲಿ ಜಾಗ? ಸಿಗ್ನಲ್ಲಿನ ಸೆಕೆಂಡುಗಳಲ್ಲಿ ಕಾತುರ. ರೇಟಿಂಗ್ಸ್, ಪ್ರಮೋಷನ್ನು, ಜಾಬ್ ಚೆಂಜ್.

ನಾಳೆಯಿಂದ ದಾರಿ ಬದಿಯಲ್ಲಿ ಬಾಳೆಹಣ್ಣು ಕೊಳ್ಳಬಾರದು. ಸೋಡೆಕ್ಸೋ ಕೂಪನ್ನುಗಳ ರಾಶಿಗೆ ಮುಕ್ತಿ. ಬಣ್ಣ ಬಣ್ಣದ ಬಲೂನುಗಳ ಒಳಗೆ ಖಾಲಿ ಖಾಲಿ. ಐದು ದಶಕದ ಬದುಕಿನ ಕ್ಯಾಬ್ ಡ್ರೈವರ್. ಸ್ಟಾರ್ಟ್, ಕ್ಲಚ್. ಆಕ್ಸಿಲೇಟರ್. ಬ್ರೇಕ್.

ಎಲ್ಲರ ಬದುಕು ಮುಷ್ಟಿಯಲ್ಲಿ ಬಿಗಿ ಹಿಡಿದ ಮರಳು - ಕನಸು. ಮುಂದಿನ ವಾರದ ಮದುಮಗಳು ಸ್ಕೂಟಿಯ ಮೇಲೆ, ದೊಡ್ಡ ದೊಡ್ಡ ಕಣ್ಣುಗಳಲ್ಲಿ ಪುಟ್ಟ ಪುಟ್ಟ ಕನಸುಗಳ ನೀಲಾಂಜನ. ಕಿರುಬೆರಳಿನ ಅಂಚಿನಲ್ಲಿ ಕೆಂಪಾಗದೆ ಉಳಿದ ಮದರಂಗಿ. ಬಟ್ಟಲು ತುಂಬ ಅಕ್ಷತೆ, ಪೆಟ್ಟಿಗೆಯಿಂದ ಹೊರತೆಗೆದ ಅಮ್ಮನ ರೇಶಿಮೆ ಸೀರೆ.ಬಿಳಿಯ ಮುಗಿಲಿನ ಹಣೆಯ ಮೇಲೆ ಕೆಂಪು ಸೂರ್ಯ ಬಿಂದಿ, ಆಡುತ್ತ ಬೆಳೆದ ಮುದ್ದಿಗೆ ವಿರಾಮ.

ಸಿಗ್ನಲ್ಲಿನ ಕೆಂಪು. ಮೂಲೆಯಲ್ಲಿ ಆಂಬ್ಯುಲೆನ್ಸ್. ಶರಶಯ್ಯೆಯಲ್ಲಿ ಮಲಗಿರುವ ಭೀಷ್ಮ , ಕತ್ತಲು ದೇವರೇ ಬೆಳಕನ್ನೇ ನುಂಗುವ ಕತ್ತಲು. ದಾಹವಾದರೆ ಅರ್ಜುನನಿಲ್ಲ. ಕಾರು ಒರೆಸುವ ಬಟ್ಟೆ ಮಾರುವ ಹುಡುಗಿ. ಕಂಕುಳಲ್ಲಿ ನಿದ್ರಿಸಿರುವ ರಾಜಕುಮಾರಿ. ಕೊಳೆಯಾದ ಬದುಕು ಒರೆಸಲು ಬಟ್ಟೆಯಿಲ್ಲವೆ?

ಭೂಮಿಯೊಡಲಲ್ಲಿ ಬರಿದಾಗುತ್ತಿರುವ ನೀರು, ಇಣುಕಿದಷ್ಟು ಒಳಸರಿದಂತಿರುವ ಕಣ್ಣು, ಸುಡುಬಿಸಿಲಿನ ಸಿಗ್ನಲ್ಲು ಆವಿಯಾಗಿದೆ ಎಲ್ಲರ ಕಣ್ಣೀರು. ಹತ್ತಿರದಲ್ಲೆ ಸುಳಿದಾಡುತ್ತಿದ್ದಾನೆ ಮಾಧವ, ಮಾರಾಟಕ್ಕಿಟ್ಟಿರುವ ಗೊಂಬೆಗಳು ಖಾಲಿಯಾದರೆ ಇವತ್ತು ರಾತ್ರಿಯೇ ಇವಳು ಮೀರಾ, ಸಿಗ್ನಲ್ಲಿನ ಎದುರಿನಲ್ಲಿ ಗಂಧರ್ವರ ಲೋಕ.

ಹಸಿರು ಹಳದಿ ಕೆಂಪು ಹಳದಿ ಹಸಿರು. ಎದೆಗಳಲ್ಲಿ ಮಂಕಾಗಿ ಉರಿಯುತ್ತಿರುವ ಹಣತೆ ಮಿಣಕ್ ಮಿಣಕ್ ಎನ್ನುತ್ತಿದೆ, ಸಿಗ್ನಲ್ಲಿನ ಹಸಿರು ಜ್ವಲಿಸುತ್ತಿದೆ.

ಬದುಕು ದೊಡ್ಡದು. ಅವರವರ ಪರಿಧಿಯಲ್ಲಿ ಅವರವರ ಓಟ, ಮುಗಿಯದ ಆಟ...

Wednesday, February 22, 2017

ಕಾರ್ತೀಕ

ಕಾರ್ತೀಕ , ಕಡು ನೀಲಿ ರಾತ್ರಿಯಲ್ಲಿ ಹಣತೆಗಳ ಹಚ್ಚಿ ಸಾಲಂಕೃತಗೊಂಡ ತುಳಸಿಗೆ , ಬೆಟ್ಟದ ನೆಲ್ಲಿಕಾಯಿಯ ಜೊತೆಗೆ ಮದುವೆ. ಶುಭ್ರ , ನಿರ್ಮಲ , ಪವಿತ್ರ ತುಳಸಿ , ಊರ ಹೊರಗಿನ ಏರು ಬೆಟ್ಟದಿಂದ ಪಲ್ಲಕ್ಕಿಯಲ್ಲಿ ಬಂದಿಳಿದ ನೆಲ್ಲಿ. ಧೂಳು , ಹುಳಿ . ಮೆಚ್ಚಿ ತಿಂದವರಿಗಷ್ಟೇ ನೆಲ್ಲಿಯ ರುಚಿ . ಮೆಚ್ಚಿ ವರಿಸಿದ ತುಳಸಿಗಷ್ಟೇ ನೆಲ್ಲಿ . ಕಾರ್ತೀಕದ ಹಬ್ಬಕ್ಕೆ ಪುಟ್ಟ ಪುಟ್ಟ ಮಂಟಪ , ನಾಲ್ಕು ಕಡೆ ಹೂಗಿದಿಟ್ಟ ಗೂಟ , ಮೇಲೊ೦ದು ದಬ್ಬೆ , ಬಿಗಿ ಹಿಡಿಯಲು ಬಾಳೆಯ ದಾರ . ದಬ್ಬೆಯ ಅಂಚಿನಲ್ಲಿ , ಬದಿಯಲ್ಲಿ , ತುದಿಯಲ್ಲಿ , ಉತ್ತರದಲ್ಲಿ , ದಕ್ಷಿಣದಲ್ಲಿ , ಮಧ್ಯದಲ್ಲಿ , ಮೂಲೆಯಲ್ಲಿ ಹಚ್ಚಿಟ್ಟ ಹಣತೆಗಳು . ಅಂಗಳದ ತುದಿಯಲ್ಲಿ ಸಾಲು ಸಾಲಾಗಿ ಹಚ್ಚಿಟ್ಟ ಮೊ೦ಬತ್ತಿ. ಕೆಲವು ನೆಟ್ಟಗೆ ನಿಂತಿವೆ ಕೆಲವು ಸೊಟ್ಟಗೆ ಕುಳಿತಿವೆ , ಹಸಿ ನೆಲದಲ್ಲಿ ಹೊಸ ಬೆಳಕು . ಚಳಿಗಾಲದ ಗಾಳಿಗೆ ದೀಪಗಳ ಹೊಯ್ದಾಟ . ಅವಳು ಲಂಗ ದಾವಣಿಯ ಹುಡುಗಿ ಅವನು ಪಂಚೆ ಶರಟಿನ ಹುಡುಗ . ಮೊ೦ಬತ್ತಿ ತಂದಿಟ್ಟವನು , ಮೊ೦ಬತ್ತಿ ಹುಗಿದಿಟ್ಟವನು ಅವನು , ದೀಪ ಹಚ್ಚುವವಳು ಅವಳು . ತುಳಸಿ - ನೆಲ್ಲಿ , ಶುಭ್ರ , ಪವಿತ್ರ ಸ್ವಚ್ಚ೦ದ . ಹೆಣ್ಣು ದೀಪ ಹಚ್ಚಲಿ , ಗಂಡು ದೀಪ ಕಾಯಲಿ. ಹಣತೆ ಹಚ್ಚುವಾಗ ಅರಿವಿರದೆ ಕೈ ತಾಕಿದರೆ ಅದೇ ಲಕ್ಷದೀಪೋತ್ಸವ .
ಕಾರ್ತಿಕವೆಂದರೆ ಕತ್ತಲ ಹಬ್ಬ . ಕತ್ತಲ ರಾತ್ರಿಯಲ್ಲಿ ದೀಪ ಬೆಳಗುವ ಹಬ್ಬ. ಕೋಟ್ಯಾ೦ತರ ನಕ್ಷತ್ರಗಳ ಅಡಿಯಲ್ಲಿ ಸಾವಿ ಸಾವಿರ ಹಣತೆ . ಅಪ್ಪ ಹಣತೆ , ಅಮ್ಮ ಹಣತೆ , ಅಣ್ಣ ಹಣತೆ , ತಮ್ಮ ಹಣತೆ , ಹುಡುಗ ಹಣತೆ, ಹುಡುಗಿ ಹಣತೆ , ಆಯಿ ಹಣತೆ , ಅಜ್ಜ ಹಣತೆ . ಮನೆಯೆದುರಿಗೆ ನೇತುಬಿಟ್ಟ ಆಕಾಶಬುಟ್ಟಿ. ಕಾರ್ತಿಕದ ಸಣ್ಣ ಚಳಿಯೊಳಗೆ , ಊರು ಬಿಳಿಯ ಬಣ್ಣದ ಹಾಳೆಯ ಮೇಲೆ ಬರೆದ ಕವಿತೆ . ಬದುಕು ದೇದೀಪ್ಯಮಾನ. ಕೇರಿಯಾಚೆಯಿಂದ ಕೇರಿಯೊಳಗಿನಿಂದ ಕಡು ನೀಲಿ ರಾತ್ರಿಯಲ್ಲಿ ಕಾರ್ತಿಕಕ್ಕೆ ಬಂದವರೆಷ್ಟೋ . ಎಲ್ಲರ ಕೈಯಲ್ಲಿ ಎಣ್ಣೆಯ ಪುಟ್ಟ ಪುಟ್ಟ ಡಬ್ಬ. ಹಣತೆ ಉರಿದಷ್ಟು ಎಣ್ಣೆ. ಕೇರಿಯ ಕತ್ತಲೊಡಲಿನಿಂದ ಬಂದವರು , ಹಣತೆ ಹಚ್ಚಿ ಬೆಳಕಿನಲ್ಲಿ ನಿಂತರು .

ತಮಸೋಮಾ ಜ್ಯೋತಿರ್ಗಮಯ . . . ಕತ್ತಲೆಯಿಂದ ಬೆಳಕಿನೆಡೆಗೆ , ಅಜ್ಞಾನದಿಂದ ಜ್ಙಾನದೆಡೆಗೆ

ಎಣ್ಣೆ ಹೊಯ್ದ ಕೈಯಲ್ಲಿ ಜಿಡ್ಡು , ಅಂಟು . ಎಣ್ಣೆಯೇ೦ದರೆ ಅಂಟಲ್ಲವೇ ? ಅಂಟು ಅಂಟುತ್ತ ಅಂಟಿನೊಟ್ಟಿಗೆ ಬೆಳೆಯುವ ನಂಟು . ಹಣತೆ ಹಚ್ಚುವ ತುಳಸಿ , ಎಣ್ಣೆ ಹೊಯ್ಯುವ ನೆಲ್ಲಿ . ಪೂಜೆಗೆ ಕುಳಿತ ಅಪ್ಪ , ನೈವೇದ್ಯದ ಪಾತ್ರೆಯನ್ನ ಹೊತ್ತು ತರುತ್ತಿರುವ ಅಮ್ಮ . ಬದುಕೊಂದು ಅಶ್ವತ್ಥ ಮರ . ವಿಶಾಲ , ವೈವಿಧ್ಯ , ಸನಾತನ . ಇವತ್ತು ಮನೆಯಂಗಳದಲ್ಲಿ ಮದುವೆ , ನಾಳೆ ಅಶ್ವತ್ಥ ಮರದ ಕಟ್ಟೆಯಲ್ಲಿ ಊರ ಕಾರ್ತಿಕ . ಅಶ್ವತ್ಥ ಮರಕ್ಕೊಂದು ನಿರಂತರ ಪ್ರದಕ್ಷಿಣೆ . ಶುರುವಾದಲ್ಲಿಂದ ಕೊನೆಯವರೆಗೆ ,ಮತ್ತೆ ಕೊನೆಯಿಂದ ಶುರುವಿನೆಡೆಗೆ . ಬೆಳಕಿನಿಂದ ಕತ್ತಲೆಯೆಡೆಗೆ , ಕತ್ತಲೆಯಿಂದ ಬೆಳಕಿನೆಡೆಗೆ . ಕತ್ತಲಡಿಯಲ್ಲಿ ಬೆಳಕು . ಕತ್ತಲೆಯಿಂದಲೇ ಬೆಳಕು . ಕತ್ತಲೆಡೆಯಿಂದ ಬೆಳಕಿನೆಡೆಗೆ. ರಾತ್ರಿಯಿಂದ ಹಗಲು , ಹಗಲಿನಿಂದ ರಾತ್ರಿ . ಕತ್ತಲಾಳದಲ್ಲಿ ಬೆಳಕಿನ ಕುಡಿ , ದೇವನಿರುವ ಗರ್ಭಗುಡಿಯ ಕತ್ತಲಲ್ಲಿ ಹಣತೆ , ತುಳಸಿಯ ಗರ್ಭದಲ್ಲಿ ಜೀವ . ಬದುಕು - ಕತ್ತಲು ಬೆಳಕುಗಳ ನಡುವಿನ ಕಣ್ಣಾಮುಚ್ಚಾಲೆ , ಬೆಳಕು ಕತ್ತಲುಗಳ ನಡುವಿನ ನಿರಂತರ ಪಯಣ , ಅನ್ವೇಷಣೆ .

ಸೂರ್ಯ ಮುಳುಗುವ ತನಕ ರಾತ್ರಿಯಾಗುವುದಿಲ್ಲವಂತೆ ;
ರಾತ್ರಿಯಾಗುವ ತನಕ ನಕ್ಷತ್ರಗಳಿಲ್ಲವಂತೆ
ಕಿಡಿಯ ಚೆಲ್ಲುವ ಪುಣ್ಯ , ಚಂದ್ರನಿಗೆ ಕಲೆಯಿಲ್ಲವಂತೆ ,
ಹಾಲುಬೀದಿಯಲಿ ಗೋಧೂಳಿಯೇಳುವದಿಲ್ಲವಂತೆ . - ಕೆ ಎಸ್ ನ್ ( ರೂಪಕ ರಾತ್ರಿ )

Wednesday, January 25, 2017

ದೀಪಾವಳಿ

ದೀಪಾವಳಿಯೆ೦ದರೆ ಜಗುಲಿಯಿಂದ ಹೆಬ್ಬಾಗಿಲಿನ ತನಕ ಹಚ್ಚಿಟ್ಟ ಪುಟ್ಟ ಪುಟ್ಟ ದೀಪ . ನೀಲ ನೀಲಾಂಜನ , ಒಂದರ ಪಕ್ಕ ಇನ್ನೊಂದು , ನಿಶ್ಚಲ , ನೀಲ ಮಂದ. ಕಡುನೀಲಿಯ ಕತ್ತಲೆಯಲ್ಲಿ ನಕ್ಷತ್ರ. ಅಂಗಳದಲ್ಲಿ , ಗೊಬ್ಬರ ಗುಂಡಿಯ ಬಳಿ , ಸೋಮಸಾಗರದ ಉದ್ದನೆಯ ರಥಬೀದಿಯ ಇಕ್ಕೆಲಗಳಲ್ಲಿ , ರಥಬೀದಿಯ ಅಂಚಿನ ಬಸವಣ್ಣನ ಕಲ್ಲು ಮೂರ್ತಿಯ ಬಳಿ , ಕೊಟ್ಟಿಗೆಯ ಹತ್ತಿರ , ಊರ ರಸ್ತೆ ಕೂಡುವಲ್ಲಿ , ಕೊನೆಯಾಗುವಲ್ಲಿ ಅಜ್ಜ ಹಚ್ಚಿಟ್ಟ ಪಂಜು , ಪಾತಾಳದಿಂದ ಬಲಿಂದ್ರನನ್ನ ಕರೆದು ತಂದು 'ಆಯಿ' ಕೂರಿಸಿದ್ದಾಳೆ ದೇವರ ಮುಂದೆ . ಬಲಿಂದ್ರನ ತಲೆಯ ಮೇಲೆ ಅಡಿಕೆಯ ಸಿಂಗಾರ ಹೂವು ಹಣ್ಣು ಅರಿಶಿನ . ಮೋರೆಯ ಮೇಲೆ ಮಸಿಯಲ್ಲಿ ಬರೆದ ಕಣ್ಣು ಕಿವಿ ಮೂಗು ಬಾಯಿ . ಪುರುಸೊತ್ತಿಲ್ಲದ ಆಯಿಗೆ ಹಬ್ಬದ ತಯಾರಿ . ಹಬ್ಬವೆಂದಲ್ಲ ಯಾವತ್ತೂ ಪುರುಸೊತ್ತು ಅವಳಿಗೆ ? ಮಕ್ಕಳು ಮೊಮ್ಮಕ್ಕಳು ಗಂಡ ಮನೆ ಕೊಟ್ಟಿಗೆ ತವರು ಮನೆ .. ನಮಗೆಲ್ಲ ಪುರುಸೊತ್ತು ಮಾಡಿಕೊಡುವದರಲ್ಲೇ ಅವಳ ಪುರುಸೊತ್ತು . ಅಜ್ಜ ಮೌನಿ . ದೀಪಾವಳಿಯ ಹಣತೆಯಂತೆ , ದೀಪದಂತೆ . ನೀಲ ನೀಲಾಂಜನ , ಒಂದರ ಪಕ್ಕ ಇನ್ನೊಂದು , ನಿಶ್ಚಲ , ನೀಲ ಮಂದ. ಅಜ್ಜ ಆಯಿ. ಹಣತೆಯ ಹತ್ತಿರ ಮಾತ್ರ ಹಿತದ ಬೆಳಕು. ಬದುಕಿ ಬೆಳಕಾದವರು . ನಾವು ಬದುಕದೆಯೇ ಕತ್ತಲೆಯಲ್ಲಿ ನಿಂತವರು .

ದೀಪ್ ದೀಪ್ ದೀಪ್ ಓಳ್ಗೆ .. ಇಂದು ಹೋಗಿ ಮುಂದೆ ಬಾ .. ಹಬ್ಬ ಹಾಡುವವವರು ದೊಂದಿಯ ಬೆಳಕಲ್ಲಿ ಮುನ್ನೆಡೆಯುತ್ತಿದ್ದಾರೆ . ಅಲ್ಲೊಂದು ಇಲ್ಲೊಂದು ಹೊಳೆಯುವ ನಕ್ಷತ್ರ. ಬದುಕೊಂದು ಛ೦ದಸ್ಸು

ಲೋಕಲೋಕಾಂತರಾದ ದೂರ ಸೀಮೆಗಳಲ್ಲಿ
ಹೊಳೆಯುತ್ತಲಿದೆ ಚೆಲುವ ನಂದಾದೀಪ ಒಂದು ;
ಎಂಥ ಬಿರುಗಾಳಿಗು ಆರಲಾರದ ಬೆಳಕು
ಕತ್ತಲೆಯ ಗೆಲ್ಲುತ್ತಿದೆ ಎಂದಿನಂತೆಯೇ ಇಂದು -
ಎಲ್ಲರನು ಒಲವಿನಲಿ ಕಂಡು ಹರಸುತ್ತಲಿದೆ .

                                                               - ಕೆ ಎಸ್ ನ

ದೀಪದ ಬೆಳಕ ಹಚ್ಚುತ್ತಾ ಹಬ್ಬವ ಹಾಡುತ್ತ ನಡೆದಿದ್ದಾರೆ ಕೆಲವರು. ಬೆಳಕಿಗಿಂತ , ಹಣತೆಗಿಂತ ಕ್ಷಣಿಕ ಜ್ವಾಲೆಯ ಹೊತ್ತು ತಿರುಗುವವರು ಹಲವರು . ದೀಪಾವಳಿ ಅಬ್ಬರಿಸಿ ಬೊಬ್ಬಿರಿದು , ಭೋ೦ಕನೇ ನಭಕ್ಕೆ ನೆಗೆದು ಬೂದಿಯಾಗುವ ತವಕ . ಕತ್ತಲೆಯಲ್ಲಿ ಆಗಸಕ್ಕೆ ನೆಗೆಯುವ ಇಂದ್ರಜಾಲದ ಬೆಳಕಿನ ಮಾಯೆ . ಅನ್ನವಿಲ್ಲದ ಕಂದನಿಗೆ ಬೀದಿಯ ವಿಷಗಾಳಿ . ಪಟಾಕಿಯ ಎಡೆಗಳಲ್ಲಿ ಅನ್ನದ ಚೂರೊಂದು ಕರಟದೇ ಇರಬಹುದು .ಶಹರದ ಎಲ್ಲ ಪಟಾಕಿಗಳನ್ನು ಇಲ್ಲಿಯೇ ಸುಟ್ಟಿದ್ದಾರೆ ರಾತ್ರಿ ಪಾಳಿಯ ಅಪ್ಪನ ಕಣ್ಣುಗಳಲ್ಲಿ ಕೆಂಪು ಜ್ವಾಲೆ . ಸೀರೆ ಹಳೆಯದಾದರೇನು , ಅಮ್ಮನ ಸೆರಗು ಯಾವಾಗಲು ಹೊಸತೇ .

ಶ್ರೀಮಂತ ಸೌಧಗಳ ರಾಜ ಬೀದಿಗಳಲ್ಲಿ
ಕಡುಬಡವ ಈಜಲು ಪಟಾಕಿಗಳ ಹುಡುಕುತ್ತ
ಕೈಸುಟ್ಟುಕೊಂಡು ಹಿಂದುರಿಗಿ ಬಂದಿದ್ದಾನೆ .
ಆಕಾಶ ಬಾಣಗಳು ಬಾನಿನಂಗಳದಲ್ಲಿ
ಬಣ್ಣ ಬಣ್ಣದ ಬೆಳಕ ಹೂವ ಚೆಲ್ಲುತ್ತಲಿವೆ
ಕಸವ ಗುಡಿಸುವ ಹೆಣ್ಣು ಸುಟ್ಟವರ ಶಪಿಸುತ್ತಿದೆ .

                                                           -ಕೆ ಎಸ್ ನ

Monday, January 2, 2017

ನೀಲ ಮೋಡದ ಭಾವಗೀತ

ಗಾಂಧಿ ಬಜಾರಿನಲ್ಲಿ ಮಳೆಯಾಗುತ್ತದೆ. ಮುಗಿಲಿನಿಂದ ಮುತ್ತಿನ ಬೀಜಗಳು ಧೋ ಎಂದು ಧುಮುಕುತ್ತವೆ. ಹನಿಯಡಿಯಲ್ಲಿ ಮರ ದನ ಜನ ಗಿಡ ಮುದುಕ ಹುಡುಗಿ ಮದರಂಗಿ ಹೋಟೆಲು ತಿರುವು ಕೊಚ್ಚೆ ಹೂವು ಕನಸು ಹಣ್ಣು ನಿಟ್ಟುಸಿರು ಕಾರು ನೋಟ ಬೈಕು . . . .

ಕಪ್ಪು ಬಣ್ಣದ ಮೋಡ ಈಗಷ್ಟೆ ಕಂಡ ಕನಸಿನಂತೆ ತೇಲುತ್ತ ನಿಂತಿದೆ , ಸರಪರ ಓಡಾಡುವ ಜನಕ್ಕೆ ಮೋಡದ ಇಲ್ಲ , ಪುಟ್ಟ ಹುಡುಗಿಯ ಗೆಜ್ಜೆಯ ಮರೆಯಲ್ಲಿಟ್ಟ ನೆರಿಗೆಯ ಲಂಗದಂತೆ ಆವರಿಸುವ ಕಪ್ಪು ಮೋಡದ ಬಣ್ಣ . ಲೈಟು ಹಾಕುವ ಹುಡುಗ ಹೊತ್ತಿಗೆ ಮೊದಲೇ ಬೀದಿ ದೀಪಗಳನ್ನು ಹಾಕಿದ್ದಾನೆ . ಕತ್ತಲಾಗಲೇಬಾರದು ನಗರಗಳಲ್ಲಿ ಅಥವಾ ದೂರದ ಊರಿನ ಕತ್ತಲೆಯಲ್ಲಿ ಮಗನನ್ನು ಕಾಯುತ್ತ ಕುಳಿತವರು ನೆನಪಾಗುವರು ಅಂಜಿಕೆ ? ಲೈಟು ಹಾಕುವ ಹುಡುಗನಿಗೆ ಇವನ್ನೆಲ್ಲ ವಿಚಾರಿಸಲು ಪುರುಸೊತ್ತು ಇಲ್ಲ , ಮೋಡ ಕೆಳಗೆ ಬೀಳುವದರೊಳಗೆ ಪಕ್ಕದ ಬೀದಿಯ ಲೈಟು ಹಾಕಬೇಕು . ಯಾರಿಗೆ ಗೊತ್ತು , ಮೋಡದೊಳಗಿನಿಂದ ಹೊರಬಿದ್ದ ಹನಿಯೊಂದು ಬಾಯಲಿರುವ ಸಿಗರೇಟಿನ ಬೆಂಕಿ ಅಂಚಿಗೆ ತಾಗಿದರೆ ?

ಮದರಂಗಿ ಹಾಕುವ ಬಿಹಾರಿ ಹುಡುಗನಿಗೆ ಹಿಡಿದ ಅಂಗೈ ಚಿತ್ರಪಟ ಸರಿಯಾಗಿ ಕಾಣಿಸುತ್ತಿಲ್ಲ. ಮದರಂಗಿ ಮುಗಿಯುವದರೊಳಗೆ ಮಳೆ ಬರಲಿದೆಯೆ ? ಇವತ್ತಿಗೆ ಇದೇ ಕೊನೆಯ ಚಿತ್ರಪಟವೆ ? ದೇವರೆ ಇನ್ನೈದು ನಿಮಿಷ ಮೋಡ ಆಕಾಶದಲ್ಲಿರಲಿ , ಚಿತ್ರಪಟದ ಹುಡುಗಿ ಕಣ್ಣುಗಳನ್ನು ಆಗಸದಷ್ಟೇ ಅಗಲಿಸಿದ್ದಾಳೆ. ಚುಕ್ಕಿ ಹೆಕ್ಕಿ ಗೆರೆ ಚಿತ್ರ ಸೆರೆ .

ಗಾಂಧಿ ಬಜಾರಿನ ಸರ್ಕಲಿನಲ್ಲಿ ಮೋಟಾರುಗಳು ಗಡಿಬಿಡಿಯಲ್ಲಿ ಹೊರಟಿವೆ . ಅಲ್ಲಿ ಮುತ್ತ ಇಲ್ಲಿ ಅತ್ತ ಸುತ್ತ ಎಲ್ಲರಿಗು ಅಳಿಯದ ಅವಸರ , ನುಗ್ಗಿ ಹಿಗ್ಗಿದ ಧೀರರು ದಾರಿಯಿಲ್ಲದೆ ನಿಂತಿದ್ದಾರೆ. ಮೋಡದಿಂದ ಹನಿಯೊಂದು ಬೀಳುವದರೊಳಗೆ ಮೊಟಾರನ್ನು ಮನೆಗೆ ಸೇರಿಸಬೇಕು , ಕೊಚ್ಹೆಯಾದರೆ ಬಿಳಿಯ ಬಣ್ಣದ ಕಾರು . ಸಾವಕಾಶದ ಸನಿಹ ದನವೊಂದು ನಿಂತಿದೆ. ರಭಸದಿಂದ ಓಡಾಡುವ ಕ್ರಿಯೆಯೊಂದು ಅರ್ಥವಾದಂತಿಲ್ಲ ಅದಕ್ಕೆ , ತರಕಾರಿ ಮಾರುವ ಸಾಲಿನಿಂದ ಎತ್ತಿದ ಯಾವುದೊ ಒಂದು ಸೊಪ್ಪನ್ನು ಆರಾಮವಾಗಿ ಜಗಿಯುತ್ತಾ ನಿಂತಿದೆ. ಕೆಂಚು ಬಣ್ಣದ ಹೊಟ್ಟೆಗೆ ಸಗಣಿ ರಾಡಿ ಎಲ್ಲ ಸೇರಿಸಿಕೊಂಡು ನವ್ಯ ಚಿತ್ರವೊಂದನ್ನ ರಚಿಸುವ ಕಲಾವಿದನಂತೆ ಏಕಾಗ್ರತೆಯಿಂದ ನಿಂತಿದೆ. ಕಪ್ಪುಗಟ್ಟಿದ ಮೋಡದ ವಾಸನೆ ಹಿಡಿದಂತೆ ಮೂಗಿನ ಹೊಳ್ಳೆಗಳನ್ನು ಅರಳಿಸುತ್ತಿದೆ. ಮಳೆಯಾಗುವದು ಗೊತ್ತಿದೆಯೆನೋ ? ಆದದ್ದು ಆಗಲಿ ಎನ್ನುವ ಭಂಡತನವೋ ಅಥವಾ ದಾರ್ಶನಿಕತೆಯೋ ? ದನ ಶಾಂತವಾಗಿದೆ . ಜನ ಅಶಾಂತವಾಗಿದ್ದಾರೆ . ಮಳೆಯಾಗಲಿ ಎಂದು ಹುಡುಗನ ಕಾತುರ , ಇನ್ನೊಂದಿಷ್ಟು ಕಾಲ ಹುಡುಗಿಯ ಜೊತೆಗೆ ಯಾವದೂ ಸೂರಿನ ಕೆಳಗೆ ನಿಂತಿರಬಹುದು. ಗಾಂಧಿ ಬಜಾರಿನ ಮರಗಳ ನೆತ್ತಿಗೆ ನೀರು ಬೇಕಾಗಿದೆ. ಬುಡ ಬೇರು ಡಾಂಬರಿನಲ್ಲಿ ಕಳೆದುಹೋಗಿದೆ. ಪುಟ್ಪಾತಿನಲ್ಲಿ ಮರ ಬೆಳೆದಿದ್ದೇಕೆ ? ಮರದ ಕೆಳಗೆ ಸೊಪ್ಪು ಮಾರುವ ಅಜ್ಜಿ . ಈಗಷ್ಟೆ ಯಾರೋ ಅನಾಮಿಕ ಚಿತ್ರಕಾರ ಬಿಡಿಸಿಟ್ಟ ಚಿತ್ರದಂತೆ ಸೊಪ್ಪು ರಾಶಿಯ ಮಧ್ಯೆ ಬಾಯಿ ತುಂಬ ವೀಳ್ಯೆದೆಲೆ ತುಂಬಿಕೊಂಡ ಅಜ್ಜಿ . ಸುಕ್ಕುಗಟ್ಟಿದ ಚರ್ಮದ ಮಧ್ಯೆ ಕಣ್ಣು ಕಿವಿ ಮೂಗು ನಾಲಗೆ. ಹಣೆಯ ಮೇಲಿನ ಬಿಳಿಯ ಬಣ್ಣ ಅರ್ಧ ಮುಖವನ್ನು ಮುಚ್ಚಿದೆ . ಅರೆ ತೆರೆದ ಕಣ್ಣು , ಮಸುಕು ಬದುಕು . ಮುಸ್ಸಂಜೆ ಕವಿದ ಮೇಲೆ ಅಜ್ಜಿಗೆ ಚಿಲ್ಲರೆ ಕಾಸುಗಳು ಕಾಣುವದಿಲ್ಲ , ರುಪಾಯಿ ಎರಡು ರುಪಾಯಿ ಹುಡುಕಿ ಕೂಡಿಟ್ಟ ಹನಿ ಹರಿದು ಸೇರಿದ್ದೆಲ್ಲಿ ? ಅರೆ ತೆರೆದ ಕಣ್ಣಿನ ಅಂಚಿನಿಂದ ಸದಾಕಾಲ ಒಸರುವ ನೀರು. ಮೊನ್ನೆಯಷ್ಟೇ ಶುರುವಾದ ಬೃಹದಾಕಾರದ ಸುಪರ್ ಮಾರ್ಕೆಟ್ ಗಳು , ಒಳಗೆ ಚಟಿಪಿಟಿ ಓಡಾಡುವ ಕೆಲಸದ ಹುಡುಗಿಯರನ್ನು ರೇಗಿಸುತ್ತಿದ್ದಾರೆ ಕೆಲಸದ ಹುಡುಗರು. ಯಾವುದೋ ಕಂಪನಿಯ ಸಮವಸ್ತ್ರ ತೆಗೆದು ಅವರಾಗಲು ಕಾಯುತ್ತಿರುವ ಇವರು , ಮಳೆಯ ಪರಿವೆಯಿಲ್ಲದ ಕೊಳ್ಳುಬಾಕರು .

ರೋಟಿ ಘರ್ ನ ಬಿಸ್ಸಿ ಬಿಸ್ಸಿ ಕಾಪಿಯ ಹಬೆ ಸುರುಳಿ ಸುರುಳಿಯಾಗಿ ಮೇಲಕ್ಕೆ ಹೋಗುತ್ತಿದೆ , ಹಬೆಯ ಹಾಯಿ ದೋಣಿ ಮೋಡಕ್ಕೆ ಪಯಣ . ಬಾಳೆಹಣ್ಣು ಮಾರುವ ಅಕ್ಕ ಹಣ್ಣಿನ ಮೇಲೆ ಪರದೆಯೊಂದನ್ನ ಹೊದೆಸಿದ್ದಾಳೆ , ಬೆತ್ತದ ಬುಟ್ಟಿಯಲ್ಲಿ ರಥದ ಚಕ್ರದಂತೆ ಸುರುಳಿಯಾದ ಹಳದಿ ಹಣ್ಣುಗಳು ಬೆಚ್ಚಗೆ ರಜಾಯಿ ಹೊದ್ದು ಮಲಗಿವೆ . ಅಕೋ , ಅವರು ಬರುತ್ತಿದ್ದಾರೆ , ಹಣ್ಣು ಕೊಳ್ಳಲು ಅಲ್ಲ , ಅಕ್ಕನ ಗಂಡ ಮತ್ತೆ ಸಾಲ ಮಾಡಿರಬೇಕು . ಎದುರಿಗಿರುವ ಬಟ್ಟೆಯಂಗಡಿಯ ರೇಡಿಯೋ ಸದನದಲ್ಲಿ ಮದ್ಯಪಾನ ನಿಷೇದ ತೆಗೆಯುವ ಚರ್ಚೆಯಾ ಸುದ್ದಿ ಬಿತ್ತರಿಸುತ್ತಿದೆ. ಮೋಡದೊಳಗಿನ ಹನಿ ಯಾರ್ಯಾರದೋ ಕಣ್ಣಿನಲ್ಲಿ ಇಳಿದಿದೆ , ಕಪ್ಪು ಮೋಡ ಮಳೆ ಸುರಿಸಲಿ , ಹನಿ ತುಂಬಿದ ಕಣ್ಣು ಹರಿದು ಹೋಗಲಿ , ಹೊಟ್ಟೆಗಿಲ್ಲದ ಬದುಕುಗಿಲ್ಲದ ತುತ್ತು ಕೊಡಲಾಗದ ಅಕ್ಷರಗಳು ಹರಿಹೋಗಲಿ , ಅಂಕಿತದಲ್ಲಿ ಕೈಗೆತ್ತಿಕೊಂಡ ಪುಸ್ತಕವನ್ನು ಕೆಳಗಿಟ್ಟಿದ್ದೇನೆ.


ಗಾಂಧಿ ಬಜಾರಿನಲ್ಲಿ ಮಳೆಯಾಗುತ್ತದೆ. ಮುಗಿಲಿನಿಂದ ಮುತ್ತಿನ ಬೀಜಗಳು ಧೋ ಎಂದು ಧುಮುಕುತ್ತವೆ. ಹನಿಯಡಿಯಲ್ಲಿ ಮರ ದನ ಜನ ಗಿಡ ಮುದುಕ ಹುಡುಗಿ ಮದರಂಗಿ ಹೋಟೆಲು ತಿರುವು ಕೊಚ್ಚೆ ಹೂವು ಕನಸು ಹಣ್ಣು ನಿಟ್ಟುಸಿರು ಕಾರು ನೋಟ ಬೈಕು . . . .