Wednesday, April 27, 2011

ರಸ್ತೆ

ಕತೆಯೆಂದುಕೊಂಡು ಓದುವ ಕತೆಯಲ್ಲವೇನೋ ? ಇದು ಏನು ಎನ್ನುವುದರ ಬಗ್ಗೆ ನನಗೂ ಸಂಶಯವಿದೆ. ಬೆಂಗಳೂರಿನಿ೦ದ , ಹೈದರಾಬಾದಿಗೆ ವರ್ಗವಾದ ನಂತರ ನಾನು ಹುಬ್ಬಳ್ಳಿ - ರಾಯಚೂರು ಮಾರ್ಗವಾಗಿ ಹೈದರಾಬಾದಿಗೆ ಓಡಾಡುವಂತಾಯಿತು. ಇಂತಹದೇ ಒಂದು ಓಡಾಟದಲ್ಲಿ ನನಗೆ ಸಿಕ್ಕಿದ ಡೈರಿಯ ಕೆಲವು ಪುಟಗಳನ್ನ ನಾನು ಕತೆಯನ್ನಾಗಿ ನಿರೂಪಿಸಲು ಹೊರಟಿದ್ದೇನೆ. ಇಲ್ಲಿನ ಪಾತ್ರಗಳಿಗೆ ಹೆಸರು ಕೊಟ್ಟವನು ನಾನಾದರೂ ಪಾತ್ರಗಳು ನನ್ನವಲ್ಲ. ಪಕ್ಕದ ಸೀಟ್ ನವರ ಡೈರಿ ಓದಿದ ಪಾಪ ಪ್ರಜ್ಞೆ ಹಂಚಿಕೊಳ್ಳುತ್ತ....

ಕಥಾನಾಯಕ  : ಹೆಚ್. ಕೆ. ಕಮಲನಾಥ ಕಾರಣಿಶ್ವರ ಶರ್ಮ
ಕಥಾನಾಯಕಿ : ಸುಪ್ರಜಾ ಹೆಗಡೆ
.
ನನಗೆ ರಸ್ತೆಗಳೆಂದರೆ ಹೆದರಿಕೆ. ರಸ್ತೆಗಳು ನನ್ನನ್ನು ಭಯಪಡಿಸುತ್ತಿದ್ದವು. ರಸ್ತೆಗಳು ನನ್ನನ್ನು ಆತಂಕಗೊಳಿಸುತಿದ್ದವು. ಎಲ್ಲೋ ಆರಂಭವಾಗಿ ಮತ್ತೆಲ್ಲೋ ಸೇರಿ , ಸರಕ್ಕನೆ  ತಿರುವಿಕೊಂಡು , ಅಗಾಧವಾಗಿ ಹರವಿಕೊಂಡು , ಕೆಲವೊಮ್ಮೆ ಎಡಕ್ಕೆ , ಕೆಲವೊಮ್ಮೆ ಬಲಕ್ಕೆ ಮತ್ತೊಮ್ಮೆ ನೇರವಾಗಿ , ಅಂಕಾಗಿ , ಡೊಂಕಾಗಿ , ಅಂಕು- ಡೊಂಕಾಗಿ , ವೇಗವಾಗಿ , ನಿಧಾನವಾಗಿ , ಸಣ್ಣಗಾಗಿ , ದೊಡ್ಡದಾಗಿ , ಉದ್ದವಾಗಿ , ಅಗಲವಾಗಿ , ಏರಾಗಿ , ಏರು ಪೇರಾಗಿ, ಏರು ಪೇರು ಇಳಿಜಾರಾಗಿ , ತಗ್ಗು ದಿಣ್ಣೆಯಾಗಿ , ಹೀಗೆ ಹಲವಾರು ಸ್ವರೂಪ ಹೊಂದಿದ ರಸ್ತೆಗಳು ನನ್ನನು ದಿಗಿಲುಗೊಳಿಸುತ್ತಿದ್ದವು. ಇಲ್ಲಿಂದ ಹೊರಟು ಮತ್ತೆಲ್ಲೋ ತಲುಪಿಸಿ , ಮತ್ತೆ ರೂಪಾಂತರ ಹೊಂದಿ ಇನ್ನೆಲ್ಲೋ ತಟ್ಟನೆ ಕೊನೆಯಾಗುವ ರಸ್ತೆಗಳು ನನಗೆ ಕಳವಳವನ್ನುಂಟು ಮಾಡುತಿದ್ದವು. ಕೆಲವೊಮ್ಮೆ ಎಲ್ಲ ರಸ್ತೆಗಳು ಒಂದು ಕಡೆ ಒಂದಾಗುತ್ತಿದ್ದವು. ಹಲವು ರಸ್ತೆಗಳು ಒಂದಾಗಿ , ಒಂದು ಎರಡಾಗಿ , ಎರಡು ಮತ್ತೆ ಮತ್ತೇನೋ ಆಗಿ ಓಡಾಡುತ್ತಿದ್ದವು.
ರಸ್ತೆ  ಓಡುತಿತ್ತು. ರಸ್ತೆ ನಿಧಾನವಾಗುತಿತ್ತು. ರಸ್ತೆ ಬಳುಕುತಿತ್ತು. ರಸ್ತೆ ಮಲಗಿತ್ತು. ರಸ್ತೆ ಕಿರಿದಾಗಿ ಕೊನೆಗೊಮ್ಮೆ ಇಲ್ಲವಾಗುತಿತ್ತು.
ಇಂತಹ ರಸ್ತೆಗಳ ಮೇಲೆ ಜನರಿರುತ್ತಿದ್ದರು. ಹಲವರು ನಡೆಯುತ್ತಿದ್ದರು. ಕೆಲವರು ನಿಂತಿದ್ದರು.  ದನ ಕರುಗಳು ಇರುತಿದ್ದವು. ನಾಯಿ ಕೆಲವೊಮ್ಮೆ ಓಡುತಿತ್ತು. ಬಾಲ ಅಲ್ಲಾಡಿಸುತ್ತಿತ್ತು.  ಪ್ರಾಣಿಯೊಂದು ಮಲಗಿತ್ತು.  ಬಸ್ಸು ಕಾರು ಲಾರಿಯ೦ತ ವಸ್ತುಗಳು  ಬರ್ರನೇ ಓಡುತ್ತಿದ್ದವು.
ನಿಮಗೆ ಅಚ್ಚರಿಯೆನಿಸಬಹುದು ರಸ್ತೆ ನನ್ನನ್ನು ಭಯಪಡಿಸುತ್ತಿತ್ತು. ರಸ್ತೆ ನನ್ನ ನೆನಪಿಗೆ ನನ್ನ ನೂಕುತ್ತಿತ್ತು.
ರಸ್ತೆ ನನಗೆ ನೆನಪಿಸುತಿತ್ತು. ಸಂಬಂಧವನ್ನ ನೆನಪಿಸುತಿತ್ತು.. ನನ್ನ ಅವಳ ಸಂಬಂಧ. ಅವಳ ನನ್ನ ಸಂಬಂದ.
ಕೆಲವೊಮ್ಮೆ ರಸ್ತೆ ನುಣುಪಾಗಿತ್ತು.  ನುಣುಪುರಸ್ತೆ ಮೇಲೆ ಪಾದಗಳು ಪಯಣಿಸುತ್ತಿದ್ದವು. ಕೆಲವು ಪಾದಗಳು ನುಣುಪು. ಕೆಲವು ಒರಟು. ಹಲವು ರಸ್ತೆಯಷ್ಟೇ  ಬಿರುಕು. ಕೆಲವೊಮ್ಮೆ ರಸ್ತೆ ಉಬ್ಬಾಗಿರುತ್ತಿತ್ತು. ಉಬ್ಬು ರಸ್ತೆಯ ಮೇಲೆ ಜನ ದನ ಹುಷಾರಿಯಲ್ಲಿ ಓಡಾಡುತ್ತಿದವು. ಕೆಲವು ರಸ್ತೆಯ ತಿರುವುಗಳಲ್ಲಿ , ರಸ್ತೆಯ ಇಕ್ಕೆಲಗಳಲ್ಲಿ , " ಮುಂದೆ ತಿರುವು ರಸ್ತೆ ಇದೆ" ಎಂಬ ಎಚ್ಚರಿಕೆಯ ಫಲಕವೋ , ಇಲ್ಲ ಡೊಂಕು ರಸ್ತೆಯ ಸೂಚಿಸುವ ಹಾವಿನಂತ ರಚನೆಯೊ ಇರುತ್ತಿತ್ತು. ಹಲವರು ಎಚ್ಚರಿಕೆಯ ಎಚ್ಚರದಿಂದ ನಡೆಯುತ್ತಿದ್ದರೂ. ಇನ್ನೂ ಹಲವರಿಗೆ, ಕೆಲವರ ನಡಿಗೆಯೇ ಎಚ್ಚರಿಕೆಯಾಗಿತ್ತು. ರಸ್ತೆಯನ್ನ ಎಡಕ್ಕೆ , ಬಲಕ್ಕೆ , ಮುಂದಕ್ಕೆ , ಹಿಂದಕ್ಕೆ, ಅಡ್ಡವಾಗಿ , ಉದ್ದವಾಗಿ ದಾಟುವರಿದ್ದರು.
ಇಂತಹದೇ ಒಂದು ತಿರುವಿನ ರಸ್ತೆಯನ್ನು ನಾನು ದಾಟುತ್ತಿರುವಾಗಲೇ ಅವಳು ಎದುರಾಗಿದ್ದು. ಪರಿಚಯ  ಪ್ರಾರಂಭವಾಗಿದ್ದು ರಸ್ತೆಯಲ್ಲಿ , ತಿರುವಿನ ರಸ್ತೆಯಲ್ಲಿ. ರಸ್ತೆಯ ತಿರುವಿನಲ್ಲಿ. ನನ್ನ ತಿರುವಿನಲ್ಲಿ ಅವಳ ತಿರುವಿನಲ್ಲಿ ನಮ್ಮಿಬ್ಬರ ತಿರುವಿನಲ್ಲಿ.  ರಸ್ತೆಯಲ್ಲಿ ಎಚ್ಚರಿಕೆಯ ಫಲಕವಿತ್ತು. ನಾನು ಅಲಕ್ಷಿಸಿದ್ದೆ.
ನಾವಿಬ್ಬರು ರಸ್ತೆಯ ಮಧ್ಯದಲ್ಲಿ ಭೇಟಿಯಾದಾಗ ನಮ್ಮಿಬ್ಬರ ಎರಡೂ ಕಡೆ ಭರ್ರನೆ ವಾಹನಗಳು ಹಾದು ಹೋಗಿದ್ದವು. ರಸ್ತೆಯ ಧೂಳು ನಮ್ಮಿಬ್ಬರ ಮೇಲೂ ಬಿದ್ದಿತ್ತು. ನನಗಿಂತ ಮೊದಲು ಅವಳು ಧೂಳನ್ನು ಕೊಡವಿಕೊಂಡಳು. ಬಲಕ್ಕೆ ಹೊರಟವನನ್ನು ಎಡಕ್ಕೆ ಎಳೆದಳು. ಸೆಳೆದಳು..!
ನಾವಿಬ್ಬರು ಓದುತ್ತಿದ್ದುದು ನ್ಯಾಷನಲ್ ಕಾಲೇಜಿನಲ್ಲಿ. ನನಗಿಂತ ಒಂದು ವರ್ಷಕ್ಕೆ ಚಿಕ್ಕವಳು.
**    **    **   **   **    **   **    **
ಪ್ರಿಯ ಓದುಗರೇ, ಇಲ್ಲಿಗೆ ಇವರ ಪರಿಚಯ ಆಯಿತು. ಮುಂದೆ ಅವರ ಪ್ರೇಮ ಹೇಗೆ ಬೆಳೆಯಿತು ಎಂದೆಲ್ಲ ಬಹುವಾಗಿ ಡೈರಿಯಲ್ಲಿ ವರ್ಣಿಸಲಾಗಿದೆ. ಅವಳ ಸಕಲ ರೂಪರಾಶಿಯನ್ನು ವರ್ಣಿಸಲಾಗಿದೆ. ಅದನ್ನೆಲ್ಲ ನಾನು ಇಲ್ಲಿ ಫೋಕಸ್ ಮಾಡಲು ಹೋಗದೇ , ನಿಮ್ಮ ನಿಮ್ಮ ಕಲ್ಪನಾ ಶಕ್ತಿಗೆ ಬಿಡುತ್ತೇನೆ.
 **    **    **   **   **    **   **    **
ಡೈರಿಯ ಮುಂದುವರಿಕೆ:
ನಾನು ಪ್ರೀತಿಸುತ್ತೇನೆ. ಕೆಲವೊಮ್ಮೆ ಅತಿಯಾಗಿ. ಮತ್ತೊಮ್ಮೆ ಮಿತಿಯಾಗಿ. ಪ್ರೀತಿ ಯಾತಕ್ಕೆ ಎಂಬುದು ಗೊತ್ತಿಲ್ಲ. ಆ ದಿನಗಳಲ್ಲಿ ನಾನು ಬರೆಯುತ್ತಿದ್ದೆ.  ನಾಡಿನ ಎಲ್ಲ ಪತ್ರಿಕೆಗಳಲ್ಲಿ ನನ್ನ ಕತೆಗಳು , ಲೇಖನಗಳು , ಕವನಗಳು ಪ್ರಕಟಗೊಳ್ಳುತ್ತಿದ್ದ್ಡವು. " ಬರಹ" ಎಂಬ ಕಾವ್ಯನಾಮದ ಮೂಲಕ ನಾನು , ನನ್ನ ಮುಚ್ಚಿಟ್ಟು ಬರೆಯುತ್ತಿದ್ದೆ.
ಅವಳಿಗೆ ಹುಚ್ಚಿತ್ತು.  ಬರೆಯುವ ಹುಚ್ಚು , ಪ್ರಕಟಗೊಳಿಸುವ ಹುಚ್ಚು.  ನನಗೆ ಹಸಿವಿತ್ತು. ಉತ್ಕಟ ಹಸಿವು. ಬದುಕಬೇಕೆಂಬುದು ನನ್ನ ಹಸಿವಿನ ಶಮನಕ್ಕೊ? ಗೊತ್ತಿಲ್ಲ.
ಹಸಿವು ನನ್ನ ಆವರಿಸಿ , ಅಮುಕಿ , ಅವುಚಿ , ತಬ್ಬಿ , ಉಬ್ಬಿ , ಬಸಿದು ಬೆವರಿಸುತ್ತಿರುವಾಗ ಅವಳು ಸಿಕ್ಕಿದ್ದಳು.
ಅವಳಿಗೆ ಬಣ್ಣವಿತ್ತು.
ಬಣ್ಣ ಕಾಡುವ ಕಡು ಬಣ್ಣವಾಗಿತ್ತು.
ನನ್ನ ಕನಸಿನಲ್ಲಿ ನಾನು ಚೆಲ್ಲಿದ ಪ್ರತಿ ಬಣ್ಣವೂ , ಅವಳ ರೂಪ ಪಡೆಯುತ್ತಿದ್ದವು. ರೂಪಕ್ಕೆ ಪ್ರೀತಿಯಿತ್ತು. ಒಲವಿತ್ತು.
ನಮ್ಮಿಬ್ಬರ ನಡುವಿನ ಕುಂಡ  ಕೆಂಡದಲ್ಲಿತ್ತು.
ಕುಂಡ , ಕೆಂಡವಾಗಿ , ಕೆಂಡ ಕಾದು ಕೆಂಪಾಗಿ , ಕೆಂಪು ಶಾಖವಾಗಿ , ಶಾಖ ಸುಡುವಿಕೆಯಾಗಿ , ಸುಡುವಿನ ಉರುವಲು ನಾವಿಬ್ಬರಾಗಿ , ನಾವಿಬ್ಬರು ಸುಟ್ಟ ಜಳವಾಗುತ್ತಿದ್ದೆವು.
ಅವಳ ಹಸಿವಿಗೆ ಹೊಟ್ಟೆಇತ್ತು , ಕಾಲಿತ್ತು , ಕೈ ಇತ್ತು , ಕಿವಿಯಿಟ್ಟು, ಬಿಸಿಯಿತ್ತು , ಆಸೆಯಿತ್ತು , ..!
ಅವತ್ತು ನಾವಿಬ್ಬರು ನಮ್ಮಿಬ್ಬರ ಹಸಿವಿನ ತುದಿಯಲ್ಲಿ ಇರುವಾಗ ಅವಳೇ ಕೇಳಿದಳು.
" ಬರೆಯುವೆಯಾ?"
" ಬರೆಯುತ್ತಿದ್ದೇನೆ.! " ನಾನು
" ಯಾರು ?"
"ನಾನು?"
" ಮತ್ತೆ ನಾನು ?" ಅವಳು
" ನೀನು ನನ್ನವಳು"
" ನಿನ್ನ ನೀನು , ನನ್ನ ನಾನು ಆಗಲಾರದಾ?"
"ಅಂದರೆ"? ಹುಬ್ಬೇರಿಸಿದೆ
" ನೀನು ನಾನಾಗಿ ಬರೆಯುವೆಯ?"
" ನಿನ್ನ ಹೆಸರಲ್ಲಿ ನಾನು ಬರೆಯಬೇಕೆ?" ನಾನು
"ಪ್ಲೀಸ್" ಅವಳ ಕಣ್ಣಿನಲ್ಲಿ ತೆಳ್ಳಗಿನ ನೀರಿನ ಪೊರೆ.
ನೀರು ಕರಗಿಸುತ್ತದೆ.!  ನಾನು ಕರಗಿದೆ.

ಅವತ್ತಿನಿಂದ ನಾನು ಅವಳ ಹೆಸರಿನಲ್ಲಿ ಬರೆಯಲಾರಂಭಿಸಿದೆ. ಪ್ರತಿ ಬರಹ ಉತ್ಕಟವಾಗಲಿ ಎಂದು ಅವಳು ಬಯಸಿದಳು.
ಅಂಗಾತನೆ ಬಿದ್ದ ಹಾಸಿಗೆಯ ಮೇಲೆ ಬೋರಲು ಬಿದ್ದ ನನ್ನ ಬೆನ್ನ ಮೇಲೆ ಇಡುತ್ತಿದ್ದ ಅವಳ ಪ್ರತಿ ಹೆಜ್ಜೆಯು ನನ್ನ ಬೆನ್ನಿಂದ ಇಳಿದು ಎದೆಯೊಳಗೆ ತಲುಪಿ , " ಬರಹ" ನನ್ನು ಕೊಲ್ಲುತಿತ್ತು.
ಪ್ರತಿ ಮಿಲನವೂ  ಅವಳ ಪೂಜೆಯಾಗಿ , ಪ್ರತಿ ಪೂಜೆಯು ಅವಳಿಗಾಗಿ ಬರೆದ ಪದವಾಗಿ ,  ಪ್ರತಿ ಪದವು ಪದ್ಯವಾಗಿ , ಪದ್ಯವಲ್ಲದ್ದು ಗದ್ಯವಾಗಿ , ಗದ್ಯವಲ್ಲದ್ದು ಕಾವ್ಯವಾಗಿ , ಕಾವ್ಯವಲ್ಲದ್ದು ನವ್ಯವಾಗಿ ಬರೆದವೆಲ್ಲವೂ ಅವಳಿಗೆ ಜನಪ್ರಿಯತೆ ಕೊಟ್ಟವು.
ಅವಳ ಹೆಜ್ಜೆ , ಹೆಜ್ಜೆಯೊಳಗಿನ ಗೆಜ್ಜೆ , ಗೆಜ್ಜೆಯೊಳಗಿನ ಲಜ್ಜೆ , ಲಜ್ಜೆಯೊಳಗಿನ ಸಂಜ್ಞೆ ಎಲ್ಲಕ್ಕೂ ಸೇರಿ ನನ್ನ ಅಕ್ಷರ ಪೂಜೆ..!
ಎಲ್ಲ ಕಡೆ ಅವಳ ಹೆಸರು ಪ್ರಕಟವಾಗ ತೊಡಗಿತು. " ಬರಹ" ಎಂಬ ಜಾಗದಲ್ಲಿ " ಸುಪ್ರಜಾ ಹೆಗಡೆ " ಎಂಬ ಹೆಸರು ಜನಿಸಿತ್ತು.
ದಿನಗಳು ನಮ್ಮ ಹಿಂದೆ ಹಿಂದೆ ಸರಿದಂತೆ ಅವಳ ಕೀರ್ತಿ ಮುಂದೆ ಮುಂದೆ ನಡೆಯಿತು. ಮಿಲನ ಕಡಿಮೆಯಾದವು.
ನನ್ನೊಳಗಿನ ಬರಹನ ಒಡಲು ಮೊಗೆ ಮೊಗೆದು ಖಾಲಿಯಾಗುತ್ತಾ ಬಂದಿತು. ನಾನು ಬರಿದಾದಂತೆ ಅವಳ ಬರಹಗಳ ಉತ್ಕಟತೆ ಮಾಯವಾಗತೊಡಗಿತು. ಓದುಗ ಅವಳನ್ನು  ದೂರ ಸರಿಸ ತೊಡಗಿದ.  ಪ್ರತಿ ಕಟು ವಿಮರ್ಶೆಗೆ  ಅವಳು ನನ್ನನ್ನು ದೂರ ಸರಿಸುತ್ತಿದ್ದಳು. ಅವಳ ಖುಷಿ ಪಡಿಸಲು , ಪತ್ರಿಕೆಗೆಗಳಿಗೆ ಅವಳ ಕತೆಗಳ ಹೊಗಳಿ ಪತ್ರಗಳನ್ನ ಬರೆಯತೊಡಗಿದೆ. ಅವಳ ಹೆಸರಿನಲ್ಲಿ ನಾನು ಬರೆದ ಕತೆಗಳು ಮತ್ತೆ ನಮ್ಮ ಮನೆ ಬಾಗಿಲಿಗೆ ಬಂದು ಅಣಕಿಸುತ್ತಿದ್ದವು. ಹಾಗೆ  ಆದಾಗಲೆಲ್ಲ ಅವಳು ನನ್ನನು ಸೇರಿಸುತ್ತಿರಲಿಲ್ಲ.  ಅವಳ ಸೇರದೇ ನನಗೆ ಬರೆಯಲು ಆಗುತ್ತಿರಲಿಲ್ಲ. ಅವಳ ಆಸೆಗೆ ಬರೆದೆ. ಬರೆದ ಪದಗಳು ಅನಾಥವಾದವು. ನನ್ನದೇ ಪದಗಳು , ನನ್ನದೇ ಮನೆಯಲ್ಲಿ , ನನ್ನ ಎದುರಿಗೆ ಸಾಯತೊಡಗಿದವು.
ಒಂದು ಖಾಲಿ ದಿನ ನಡುರಸ್ತೆಯಲ್ಲಿ ಅವಳು ತಿರುಗಿ ನಡೆದಳು. ತೇಪೆ ಹಾಕಿದ ರಸ್ತೆ ತುಂಬಾ ಕಲೆಗಳು.
" ಪ್ರಜಾ ನಮ್ಮಿಬ್ಬರ ರಸ್ತೆಯಲ್ಲವೇ ಇದು?" ನಾನು
" ನಮ್ಮಿಬ್ಬರದಲ್ಲ ನಿನ್ನದು" ಅವಳು
" ಮತ್ತೆ ನೀನು?" ಕಣ್ಣಲ್ಲಿ ಮಡುಗಟ್ಟಿದ್ದು ನೀರು
" ನಾನು ದಾರಿಹೋಕಳು,"
ಹಾಗಾದರೆ ನಡೆದಿದ್ದು ಸಾಕಯೈತೆ ? ಬಾ ನಿನ್ನ ಎತ್ತಿ ಕೊಂಡು ಹೋಗುವೆ"
" ನಡೆದು ಸಾಕಾಗಿಲ್ಲ. ರಸ್ತೆ ಮುಗಿದಿದೆ. ನನ್ನ ನಡೆಯುವಿಕೆಗೆ ಆಯಾಸವಿಲ್ಲ. ಪಯಣ ಮುಂದುವರೆಸಲು ಬೇರೊಂದು ರಸ್ತೆ ಬೇಕಿದೆ"
" ಬೇರೊಂದು ರಸ್ತೆ ನಾನೇ ಆಗಬಾರದೇಕೆ?" ನಾನು ಆಸೆ ,
" ಒಂದೇ ರಸ್ತೆಯಲ್ಲಿ ಗುರಿ ತಲುಪಲು ಆಗದು , ಹಾಗೆ ತಲುಪುವಷ್ಟು ಸಣ್ಣ ಗುರಿಯೂ ನನ್ನದಲ್ಲ"
ಅವಳು  ಬೇರೊಂದು ರಸ್ತೆ  ಹಿಡಿದಳು.  ಭರ್ರನೆ ಸಾಗಿದ ವಾಹನದ ಧೂಳು ನನ್ನ ಮೇಲೆ ಬಿದ್ದಿತ್ತು. ಅವಳ ಮೇಲೆ ಬೀಳಲು ಅವಳು ಇರಲಿಲ್ಲ.  ತಿರುವಿನ ರಸ್ತೆ ಎಚ್ಚರಿಕೆ ಎಂಬ ಫಲಕ ಅವತ್ತಿನಂತೆ ಇವತ್ತು ಇತ್ತು.
**    **    **   **   **    **   **    ** 

ಪ್ರಿಯ ಓದುಗರೇ ಇಷ್ಟರಲ್ಲಿ ನಿಮಗೆ ನಮ್ಮ ಕಥಾನಾಯಕನ ಡೈರಿಯ ಉದ್ದೇಶ ಅರ್ಥವಾಗಿರಬಹುದು. ಏನು ನಡೆದಿರಬಹುದು ಎಂಬ ಸ್ಥೂಲ ಕಲ್ಪನೆಯೂ ಸಿಕ್ಕಿರಬಹುದು.  ನಿಮ್ಮಲ್ಲಿ ಕೆಲವರಿಗೆ ಅವನ ಕುರಿತು ವಿಷಾದವು ಅನುಕಂಪವೂ ಮೂಡಿರಬಹುದು. ಯಾರದು ತಪ್ಪು ಯಾರದು ಸರಿ ಎಂದು ನಾನು ಹೇಳಲಾರೆ.
ಡೈರಿ ಓದಿದ ನಂತರ ನಾನು ಕೆಲವು ಟಿಪ್ಪಣಿ ಮಾಡಿರುವೆ. ನಿಮಗೆ ಅದರ ಕುರಿತು ಏನಾದರೂ ಅನ್ನಿಸಿದರೆ ದಯಮಾಡಿ ನನಗೆ ತಿಳಿಸ ತಕ್ಕದ್ದು ಎಂದು ನನ್ನ ವಿನಯ ಪೂರ್ವಕ ಆಗ್ರಹ.
ಟಿಪ್ಪಣಿ ೧ :
ಸಂಬಂದ ಎಂದರೇನು? ಅದರ ಗುಣ ಲಕ್ಷಣಗಳೇನು? ಅದು ಹೇಗಿದೆ? ಅದಕ್ಕೆ ಆಕಾರವಿದೆಯೇ? ಇದ್ದಾರೆ ಅದು ಚಪ್ಪಟೆಯೋ? ಉಬ್ಬೋ? ತಗ್ಗೊ?  ಅದು ಗುಂಡಾಗಿದೆಯೆ? ಒರಟಾಗಿದೆಯೆ? ಮೃದುವಾಗಿದೆಯೇ? ಅದಕ್ಕೆ ಜೀವವಿದೆಯೇ? ಇಲ್ಲವಾದರೆ ಸಂಬಂದ ಸತ್ತಿತು ಎನ್ನುವದಕ್ಕೆ ಅರ್ಥವಿದೆಯೇ?  ಇದೆ ಎಂದಾದರೆ ಯಾವತ್ತಾದರೂ ಒಂದು ದಿನ ಸಾಯಲೇ ಬೇಕಲ್ಲವೇ. ?
ಎರಡು ಮನಸ್ಸುಗಳ ಉತ್ಕಟತೆಗೆ ಸಂಬಂದ ಎನ್ನಬಹುದೇ? ಸಂಬಂಧ ಎನ್ನುವದು ಕಲ್ಪಿತವೇ? ಕಲ್ಪಿತ ಎನ್ನುವದಾದರೆ  ಎರಡು ಜೀವಗಳ ಅಕ್ಷಾಂಕ್ಷ ಹಾಗೂ ರೇಖಾ೦ಶಗಳನ್ನು ಸಂಬಂದ ಎನ್ನಬಹುದೇ?
ಈ ಸಂಬಂದ ಎನ್ನುವಾದು ಕಲ್ಪಿತ ಅಲ್ಲವಾದರೆ , ನಮ್ಮಿಬ್ಬರ ಬಂಧ ವೇ ಸಂಬಂದ ಎನ್ನುವಾದಾದ್ರೆ , ನಮ್ಮಿಂದ ನಿಮ್ಮೆಡೆಗೆ ಜಿಗಿಯಲು ಬಳಸುವ, ಸರ್ಕಸ್ಸಿನಂತ ಹಗ್ಗವೇ ಸಂಬಂದ ಎಂದಾದರೆ , ಒಂದಲ್ಲ ಒಂದು ದಿನ ಹಗ್ಗ ತುಂಡಾಗಲೇ ಬೇಕಲ್ಲವೇ? ಇಲ್ಲಾ ಅದೇ ಹಗ್ಗದಿಂದ ನಿಮ್ಮನ್ನ ಉಸಿರುಗಟ್ಟಿಸಿ ಸಾಯಿಸಲು ಬಹುದಲ್ಲವೇ?

ಟಿಪ್ಪಣಿ ೨ :
ಸಂಬಂದವೊಂದು ಮುಖವಾಡ ಧರಿಸಿ ಹುಟ್ಟುತ್ತದೆಯೋ? ಅಥವಾ ಮುಖವಾಡವೆ ಸಂಬಂದವಾಗುತ್ತದೆಯೋ? ಮೊದಲೊಂದು ಮುಖವಾಡ  ಅದರ ಮೇಲೆ ಮತ್ತೊಂದು ಮುಖವಾಡ  ಹೀಗೆ ಮುಖವಾಡದ ಮೇಲೆ ಮುಖವಾಡ  ಧರಿಸಿ , ಮುಖವಾಡಗಳ ಅಡಿಯಲ್ಲಿ ಮುಖವೇ ಮರೆತು ಹೋಗಿ ಕೊನೆಗೊಮ್ಮೆ ಸಹಿಸಲಸಾಧ್ಯವಾದಾಗ ಮುಖವಾಡಗಳ ಕಿತ್ತೊಗೆದಾಗ , ಕಿತ್ತೊಗೆಯುವ ರಭಸಕ್ಕೆ ಜನ ಸ್ತಬ್ದವಾದಾಗ ಮುಖವಾಡವಿಲ್ಲದ ಮುಖ ಹೇಸಿಗೆ ತಂದಿತು.
ಎಲ್ಲೋ ಓದಿದಂತೆ ಚೆಂದದ ಹೂವಿನ ದಳಗಳನ್ನು ಎಸಳು ಎಸಳುಗಳನ್ನು ಒಂದೊಂದಾಗಿ ಕಿತ್ತು ಎಸೆದಾಗ ಕೊನೆಗೊಮ್ಮೆ ಉಳಿಯುವ ನಗ್ನ ಹೂವಿನ ಭಗ್ನ ಕುರೂಪದಂತೆ ಮುಖವಾಡ ಕಿತ್ತು ಎಸೆದ ಮುಖಗಳೆಲ್ಲ ಅಸಹ್ಯವೇ?

ಉತ್ತರ ಸಿಗದ ಪ್ರಶ್ನೆಗಳು ಹಲವಾರು.