Tuesday, December 24, 2013

ಝೂಂಡ ಕತೆಗಳು

 ಹಲವು ಝೂಂಡರ ಕೋರಿಕೆಯ ಮೇರೆಗೆ ಕೈ ಗೆ ಸಿಕ್ಕ ಝೂಂಡ ಕತೆಗಳನ್ನು ಒಂದೆಡೆಗೆ ಹೆಕ್ಕಿ ಇಟ್ಟಿದ್ದೇನೆ


                                      ಝೂಂಡ ಕತೆಗಳು  : ಕಟ್ಟುಪಾಡು


ಒಮ್ಮೆ ಝೂಂಡ ಶಿಸ್ಯರೆಲ್ಲ ಸೇರಿ ಪುಸ್ತಕವೊಂದನ್ನ ಬರೆಯಬೇಕೆಂದು ನಿರ್ಧರಿಸಿದರು. ಆದರೆ ಯಾವುದರ ಕುರಿತು ಪುಸ್ತಕ ಬರೆಯಬೇಕೆಂದು ಅವರಲ್ಲೇ ಭಿನ್ನಮತ ಮೂಡಿತು.
"ಬರೆಯುವದಾದರೆ ಝೂಂಡ ಧರ್ಮದ ಬಗ್ಗೆ ಬರೆಯೋಣ : ಶಿಸ್ಯ ೧
"ಇಲ್ಲ ಬರೆಯುವದಾದರೆ ಝೂಂಡ ದೇವರ ಬಗ್ಗೆ ಬರೆಯೋಣ " ಶಿಸ್ಯ ೨
" ಅದು ಹೇಗೆ ? ಧರ್ಮವಿದ್ದರೆ ತಾನೇ ದೇವರು , ಹಾಗಾಗಿ ಧರ್ಮದ ಬಗ್ಗೆ ಬರೆಯೋಣ ಶಿಸ್ಯ ೩
ಇಲ್ಲ, ದೇವರಿಗಾಗಿ ಧರ್ಮ. ಎಲ್ಲವನ್ನು ಸೃಷ್ಟಿಸಿದವ ದೇವರು ಹಾಗಾಗಿ ಝೂಂಡ ದೇವರ ಬಗ್ಗೆ ಬರೆಯೋಣ" ಶಿಸ್ಯ ೪
ಸಾಧ್ಯವೇ ಇಲ್ಲ ಧರ್ಮ ದೇವರನ್ನು ಸೃಷ್ಟಿಸ ಬಲ್ಲದು , ದೇವರಿಗೆ ಅಸ್ತಿತ್ವ ಬೇಕೆಂದರೆ ಧರ್ಮವಿರಬೇಕು , ಅದಕ್ಕಾಗಿಯೇ ಧರ್ಮದ ಬಗ್ಗೆ ಬರೆಯಬೇಕು " ಶಿಸ್ಯ ೫
ಕೊನೆಗೆ ಅವರು ಪುಸ್ತಕವನ್ನು ಬರೆಯಲೇ ಇಲ್ಲ !



                                          ಝೂಂಡ ಕತೆಗಳು : ಮುಕ್ತಿ


ಒಮ್ಮೆ ಝೂಂಡ ಗುರುಗಳು ಗಾಂಧೀ ಬಜಾರಿನ ಮಾರ್ಗವಾಗಿ ಎತ್ತಲೋ ಹೊರಟಿದ್ದರು.
ಇದ್ದಕ್ಕಿದಂತೆ ಅವರೆಡೆಗೆ ಗಡಿಬಿಡಿಯಲ್ಲಿ ಓಡಿ ಬಂದ ಅವರ ಶಿಸ್ಯನೊಬ್ಬ ಕೇಳಿದ :
' ಗುರುಗಳೇ ಮುಕ್ತಿ ಎಂದರೇನು ?'
'ಏನನ್ನೂ ಮಾಡದಿರುವದೇ ಮುಕ್ತಿ ' ಎಂದ ಗುರುಗಳು ಹೊರಟುಹೋದರು
ಇದಾದ ಹಲವು ವರ್ಷಗಳ ನಂತರ ಗುರುಗಳು ಮತ್ತೆ ಗಾಂಧೀ ಬಜಾರಿನ ಮಾರ್ಗವಾಗಿ ಬರಬೇಕಾಯಿತು .
ಮತ್ತೆ ಅವರ ಶಿಸ್ಯ ಅವರೆಡೆಗೆ ಗಡಿಬಿಡಿಯಲ್ಲಿ ಓಡಿ ಬಂದು ಕೇಳಿದ
' ಗುರುಗಳೇ ನಾನು ಹಲವಾರು ವರ್ಷ್ರಗಳಿಂದ ಏನನ್ನು ಮಾಡುತ್ತಿಲ್ಲ , ಆದರೂ ನನಗೇಕೆ ಮುಕ್ತಿ ಸಿಕ್ಕಿಲ್ಲ' .
' ಏಕೆಂದರೆ ನೀನು ಏನನ್ನು ಮಾಡುತ್ತಿಲ್ಲ "
ಗುರುಗಳು ಹೊರಟು ಹೋದ



                                            ಝೂಂಡ ಕತೆಗಳು : ಸತ್ಯ


ಝೂಂಡ ಗುರುಗಳು ಒಮ್ಮೆ ತಮ್ಮ ಶಿಸ್ಯ ಗಣಗಳೊಂದಿಗೆ ಚಹಾ ಕುಡಿಯುತ್ತಿದ್ದರು .
ಶಿಸ್ಯನೊಬ್ಬ ಕೇಳಿದ ' ಗುರುಗಳೇ ಎಲ್ಲವನ್ನು ಕಾಣಿಸುವ ಬೆಳಕಿರುವಾಗ ಝೂಂಡ ದೇವರು ಕತ್ತಲೆಯನ್ನೇಕೆ ಸೃಷ್ಟಿಸಿದ ?"
'ಕತ್ತಲೆಯಲ್ಲಿ ಮಾತ್ರ ನಕ್ಷತ್ರಗಳು ಕಾಣಿಸುತ್ತವೆ " ಗುರುಗಳು ಮೌನವಾಗಿ ಚಹಾ ಕುಡಿಯುವದ ಮುಂದುವರಿಸಿದರು


                                            ಝೂಂಡ ಕತೆಗಳು : ನಾವು


'ಗುರುಗಳೇ ಹಕ್ಕಿಗಳೇಕೆ ನೆಮ್ಮದಿಯಾಗಿವೆ ? ' ಶಿಸ್ಯ
'ಏಕೆಂದರೆ ಅವು ಮನುಷ್ಯರಾಗಿಲ್ಲ ' ಝೂಂಡ ಗುರುಗಳು
'ಪ್ರಾಣಿಗಳೇಕೆ ನೆಮ್ಮದಿಯಾಗಿವೆ ?'
'ಏಕೆಂದರೆ ಅವು ಮನುಷ್ಯರಾಗಿಲ್ಲ '
'ಮರಗಳೇಕೆ ನೆಮ್ಮದಿಯಾಗಿವೆ ?'
'ಏಕೆಂದರೆ ಅವು ಮನುಷ್ಯರಾಗಿಲ್ಲ '
'ಹಾಗಾದ್ರೆ ಮನುಷ್ಯರೇಕೆ ನೆಮ್ಮದಿಯಾಗಿಲ್ಲ ?'
'ಏಕೆಂದರೆ ಅವರು ಮನುಷ್ಯರಾಗಿಲ್ಲ ' ಗುರುಗಳು ಪುಸ್ತಕ ಓದುವದ ಮುಂದುವರೆಸಿದ



                                          ಝೂಂಡ ಕತೆಗಳು : ಚಕ್ರ


ಗುರುಗಳೇ ನಾನು , ಇವಳು ಮಾತನಾಡುವದೇ ಇಲ್ಲ
ಮದುವೆಯಾಗಲಿ ಎಲ್ಲ ಸರಿಯಾಗುತ್ತೆ
ಸರಿ ಎಂದ ಶಿಸ್ಯ.
ವರ್ಷಗಳು ಉರುಳಿದವು ಗುರುಗಳು ಮತ್ತೆ ಗಾಂಧೀ ಬಜಾರಿನ ಕಡೆ ಬಂದಿದ್ದರು .
ಗುರುಗಳೇ ಇವಳು ಮಾತ್ರ ಮಾತನಾಡುವದು
ಮಕ್ಕಳಾಗಲಿ ಎಲ್ಲ ಸರಿಯಾಗುತ್ತೆ " ಗುರುಗಳು
ಸರಿ ಎಂದ ಶಿಸ್ಯ.
ವರ್ಷಗಳು ಉರುಳಿದವು ಗುರುಗಳು ಮತ್ತೆ ಗಾಂಧೀ ಬಜಾರಿನ ಕಡೆ ಬಂದಿದ್ದರು .
ಗುರುಗಳೇ ಈಗ ಮಕ್ಕಳು ಮತ್ತು ಇವಳು ಮಾತ್ರ ಮಾತನಾಡುವದು "
ಮಕ್ಕಳು ಬೆಳೆದು ದೊಡ್ಡವರಾಗಿ ಅವರಿಗೂ ಮದುವೆಯಾಗಲಿ ಎಲ್ಲ ಸರಿಯಾಗುತ್ತೆ " ಗುರುಗಳು
ಸರಿ ಎಂದ ಶಿಸ್ಯ.
ವರ್ಷಗಳು ಉರುಳಿದವು ಗುರುಗಳು ಮತ್ತೆ ಗಾಂಧೀ ಬಜಾರಿನ ಕಡೆ ಬಂದಿದ್ದರು .
ಶಿಸ್ಯ ಆಗಲೋ ಈಗಲೋ ಎನ್ನುವಂತೆ ಹಾಸಿಗೆ ಮೇಲಿದ್ದ , ಅವನ ಮಾತನ್ನು ಕೇಳಿಸಿಕೊಳ್ಳಲು ಎಲ್ಲ ಸಿದ್ಧರಿದ್ದರು . ಆದರೆ ಶಿಸ್ಯನಿಗೆ ಮಾತನಾಡಲು ಆಗಲೇ ಇಲ್ಲ .


                                                ಝೂಂಡ ಕತೆಗಳು :ವಾಸ್ತವ


ಒಮ್ಮೆ ಝೂಂಡ ಶಿಸ್ಯನೊಬ್ಬ ಗಾಢ ನಿದ್ರೆ ಮಾಡಬೇಕೆಂದು ಮಂಚದ ಮೇಲೆ ಮಲಗಿದ . ಎಷ್ಟು ಹೊತ್ತಾದರೂ ಅವನಿಗೆ ನಿದ್ರೆಯೇ ಬರಲಿಲ್ಲ . ಬೇಸತ್ತ ಶಿಸ್ಯ ಹೊರಳಾಡುತ್ತಾ ಇರುವಾಗ ಮಂಚದಿಂದ ಕೆಳಗೆ ಬಿದ್ದು ಹೋದ . ಅವನು ಎಷ್ಟು ಜೋರಾಗಿ ಬಿದ್ದಿದ್ದನೆಂದರೆ ಅವನಿಗೆ ಏಳಲು ಆಗಲೇ ಇಲ್ಲ .

ಶಿಸ್ಯ ಹಾಗೆಯೇ ಮಲಗಿದ ಹಾಗೂ ಅವನಿಗೆ ಗಾಢ ನಿದ್ರೆ ಹತ್ತಿತು


                                                  ಝೂಂಡ ಕತೆಗಳು : ಜೀವನ


ಒಮ್ಮೆ ಝೂಂಡ ಶಿಸ್ಯನೊಬ್ಬ ಗಾಂಧೀ ಬಜಾರಿನ ಮಾರ್ಗವಾಗಿ ಮನೆಗೆ ಹೊರಟಿದ್ದ . ಹೋಗುವಾಗ ಇದ್ದಕ್ಕಿದ್ದಂತೆ ಅವನ ಕೈ ಚೀಲ ಕಳೆದು ಹೋಯಿತು . ಶಿಸ್ಯ ಕೈ ಚೀಲ ಹುಡುಕುತ್ತಿರುವಾಗ ಅವನ ಚಪ್ಪಲಿಗಳು ಕಳೆದು ಹೋದವು . ಇದೇನಿದು ಎಂದು ಚಪ್ಪಲಿ ಹುಡುಕುತ್ತಿರುವಾಗ ಅವನ ಅಂಗಿ ಕಳೆದು ಹೋಯಿತು. ಬೇಸರಗೊಂಡ ಶಿಸ್ಯ ಮನೆಗೆ ಹೊರಡುವದೆಂದು ನಿರ್ಧರಿಸಿ ಹೊರಟ , ಆದರೆ ಆ ವೇಳೆಗೆ ಮನೆಗೆ ಹೋಗುವ ದಾರಿ ಕಳೆದು ಹೋಗಿತ್ತು .ಏನು ಮಾಡುವದು ಎಂದು ಗೊತ್ತಾಗದೆ ಶಿಸ್ಯ ಅಲ್ಲಿಯೇ ಕುಳಿತಾಗ , ಅವನೇ ಕಳೆದು ಹೋದ.

ಶಿಸ್ಯ ಕಳೆದುದರಿಂದ ಅವನ ಬಗ್ಗೆ ಯಾವುದೇ ಮಾಹಿತಿ ಇಲ್ಲ . ಹೀಗಾಗಿಅವನ ಬಗ್ಗೆ ನಾವು ಮಾತನಾಡದಿರುವುದೇ ಲೇಸು

                                                 

                                                    ಝೂಂಡ ಕತೆಕಥಾಮೂಲ

ಝೂಂಡ ಕತೆಗಳನ್ನು ನಾನು ಬರೆಯಲು ಪ್ರಾರಂಭಿಸಲು ಸ್ಫೂರ್ತಿ ರಶಿಯಾದ ಬರಹಗಾರ ದನಿಯಲ್ ಖಾರ್ಮ್ಸ್ . ಬಹುತೇಕ ಝೂಂಡ ಕತೆಗಳು ಖಾರ್ಮ್ಸ್ ನ 'Today I wrote Nothing' ಎನ್ನುವ ಪುಸ್ತಕದ ಕತೆಗಳ ಭಾವಾನುವಾದ . ಖಾರ್ಮ್ಸ್ ಕತೆಗಳು / ಬರಹಗಳು ಯಾವುದೇ ತರ್ಕಕ್ಕೆ ಸಿಲುಕದ , ಯಾವುದೇ ಸಿದ್ದಾಂತಕ್ಕೆ ನಿಲುಕದವು . ಅವು ಅನಾಟಕೀಯವಾಗಿ ಆರಂಭವಾಗಿ ಅಷ್ಟೇ ಅನಾಟಕೀಯವಾಗಿ ಮುಗಿಯುತ್ತವೆ ಅಥವಾ ಇನ್ನು ಕತೆ ಇಲ್ಲದುದರಿಂದ ಅದು ಮುಗಿದಿದೆ ಎನ್ನುವ ಭಾಸ.

ಉದಾಹರಣೆಗೆ "ಭೇಟಿ " ಎನ್ನುವ ಕತೆ
ಹೀಗೆ ಒಂದು ದಿನ ಒಬ್ಬ ಮನುಷ್ಯ ಕೆಲಸಕ್ಕೆ ಹೊರಟಾಗ ರಸ್ತೆಯ ಮೇಲೆ ಅವನಿಗೆ ಇನ್ನೊಬ್ಬ ಮನುಷ್ಯ ಭೇಟಿಯಾದ . ಅವನು ತನ್ನ ಮನೆಯಿಂದ ಹೊರಟು ಒಂದು ತುಂಡು ಬ್ರೆಡ್ ಖರಿದಿಸಿ ಮನೆಯತ್ತಲೇ ತಿರುಗಿ ಹೊರಟಿದ್ದ.
ನಡೆದಿದ್ದು ಇಷ್ಟೇ

ಇಲ್ಲಿಗೆ ಕತೆ ಮುಕ್ತಾಯವಾಗುತ್ತದೆ

ನೀಲಿ ಟಿಪ್ಪಣಿ ಪುಸ್ತಕ ೧೬ ಎನ್ನುವ ಕತೆ :

ಇವತ್ತು ನಾನು ಏನು ಬರೆಯಲಿಲ್ಲ , ಆದರೂ ಪರವಾಗಿಲ್ಲ ..

ಇಷ್ಟೇ ಕತೆ .

ಇಲ್ಲಿ ನಾನು ನೀವು ಕಾತುರರಾಗಿ ಕಾಯುವಂತೆ ಯಾವುದೇ ರಸಾನುಭವದ ಘಟನೆಯಾಗಲಿ , ಯಾವುದೇ ರೋಚಕ ತಿರುವಾಗಲಿ ಇಲ್ಲ . ಖಾರ್ಮ್ಸ್ ನ ಬಹುತೇಕ ಕತೆಗಳು ಒಂದಕ್ಕೊಂದು ಕೊಂಡಿಯಾಗದ , ನಮಗೆ ಅರಿವಾಗುವ ವಿರೋಧಾಭಾಸ ಹುಟ್ಟಿಸುವ ಬರಹಗಳು , ಆದರೂ ಖಾರ್ಮ್ಸ್ ಇಷ್ಟವಾಗುತ್ತಾನೆ . ಮತ್ತೆ ಮತ್ತೆ ಓದುವಂತೆ ಪ್ರಚೋದಿಸುತ್ತಾನೆ. ಸಂಪ್ರದಾಯಿಕ ಕಥನ ಕ್ರಮಕ್ಕೆ ಬಹು ದೂರವಾಗಿ ಬರೆದ ಈತ ಯಾವ್ದೋ ಒಂದು ವಾಕ್ಯದಿಂದ ಕತೆಯನ್ನ ಆರಂಭಿಸಿ , ಯಾವುದೇ ತಿರುವಗಳನ್ನ ತುಂಬದೆಯೆ ನಡೆದಿದ್ದು ಹೆಚ್ಚು ಕಡಿಮೆ ಇಷ್ಟೇ ಎನ್ನುವಲ್ಲಿಗೆ ಕತೆಯನ್ನು ಮುಗಿಸುತ್ತಾನೆ . ಖಾರ್ಮ್ಸ್ ಬರೆದ ಕತೆಗಳು ಹಾಗೂ ಇರಾನಿ ಸಿನಿಮಾಗಳು ನನ್ನನ್ನು ಕಾಡುವದಕ್ಕೆ ಕಾರಣಗಳಿವೆ . ಇವೆರಡರಲ್ಲಿ ಕಾಣಸಿಗುವ ಸಾಮ್ಯತೆ ಎಂದರೆ ಇಲ್ಲಿ ಯಾವುದು ಅನಿರೀಕ್ಷಿತ ಘಟನೆಗಳು ಇಲ್ಲ . ಎಲ್ಲವು ಸರಳವಾಗಿ ನಡೆಯುತ್ತವೆ . ಆದರೆ ನಮ್ಮ ಅತಿ ವೇಗದ ಅತಿ ರಂಜನೀಯ ಬದುಕು ನಮ್ಮನ್ನು ಹೇಗೆ ತರಪೇತುಗೊಳಿಸಿದೆ ಎಂದರೆ ಪ್ರತಿ ವಾಕ್ಯದಲ್ಲೂ , ಸಿನಿಮಾದ ಪ್ರತಿ ಫ಼್ರೇಮಿನಲ್ಲು ನಾವು ರೋಚಕತೆಯನ್ನ , ತಿರುವುಗಳನ್ನು ನಿರೀಕ್ಷಿಸುತ್ತೇವೆ . ಖಾರ್ಮ್ಸ್ ಹಾಗೂ ಇರಾನಿ ಸಿನಿಮಾ ಎರಡು ನಮ್ಮನ್ನು ಪ್ರತಿ ಹಂತದಲ್ಲೂ ಬೇಸ್ತುಗೊಳಿಸುತ್ತವೆ .

ಖಾರ್ಮ್ಸ್ ಇಶ್ಟವಾಗುವದು ಇನ್ನೊಂದು ಕಾರಣಕ್ಕೆ , ನಮ್ಮ ಆಧುನಿಕ ಯುಗದ ಮೂಲ ಕಲ್ಪನೆಯಾದ ಪ್ರತಿ ವಸ್ತುವು ಪ್ರಯೋಜನಕ್ಕೆ ಬರಬೇಕು ಎನ್ನುವದನ್ನು ನಿರಾಕರಿಸುವದಕ್ಕೆ. ಇಂಜಿನಿಯರಿಂಗ ಓದಿದ್ದ ಖಾರ್ಮ್ಸ್ ಒಮ್ಮೆ ತನ್ನ ಮನೆಯಲ್ಲಿ ದೊಡ್ಡ ಗಾತ್ರದ ಯಂತ್ರವೊಂದನ್ನ ನಿರ್ಮಿಸಿದ್ದ. ಗುಜರಿ ವಸ್ತುಗಳಿಂದ ನಿರ್ಮಿಸಿದ್ದ ಅದು ಅವನ ಮನೆಯಲ್ಲಿ ಒಂದು ವಸ್ತುವಾಗಿ ಇತ್ತು ಅಷ್ಟೇ . ಇವನ ಮನೆಗೆ ಬಂದವರು 'ಯಂತ್ರ ಏನನ್ನು ಮಾಡುತ್ತದೆ ' ಎಂದು ಪ್ರಶ್ನಿಸಿದರೆ ಅವನು ಉತ್ತರಿಸುತ್ತಿದ್ದುದು ' ಅದು ಏನನ್ನು ಮಾಡುವದಿಲ್ಲ ಅದು ಯಂತ್ರ ಅಷ್ಟೇ '

ಖಾರ್ಮ್ಸ್ನ ಕತೆಗಳು ಅಷ್ಟೇ ಅಲ್ಲಿ ಏನಾದರು ಆಗಲೇಬೇಕು ಎನ್ನುವ ಯಾವ ನಿಯಮವು ಇಲ್ಲ . ಅವನ ದೃಷ್ಟಿಯಲ್ಲಿ ಕಲೆಗಳು ಅತ್ಯಂತ ಸುಂದರವಾದ ರೂಪಕಗಳು ಅಲ್ಲ . ಅವು ಕೇವಲ ನಿಜ ವಸ್ತುಗಳು . ವಸ್ತುಗಳು ವಸ್ತುಗಳು ಮಾತ್ರ . ಮನುಷ್ಯರು ಮನುಷ್ಯರು ಮಾತ್ರ. ಅವು ಸುಂದರವೂ ಅಲ್ಲ ಕುರೂಪಿಯೂ ಅಲ್ಲ.

“When verses are taken from a page and hurled at a window they should shatter glass,” Kharms once said

"ಒಂದು ಪದ್ಯವು ನಿಜವಾದ ವಸ್ತುವೇ ಆಗಿರಬೇಕು ಆಡು ಎಷ್ಟು ನಿಜವಾಗಿರಬೇಕು ಅಂದರೆ ಅದನ್ನು ಎತ್ತಿ ಬಿಸಾಕಿದರೆ ಕಿಟಕಿಯ ಗಾಜು ಒಡೆಯ ಬೇಕು "


                                                 ಝೂಂಡ ಕತೆಗಳು:  ಸಾಧನೆ


ಯಂತ್ರ ಕುಶಲಿಯಾಗಿದ್ದ ಝೂಂಡ ಶಿಸ್ಯನೊಬ್ಬ ಒಮ್ಮೆ ಗಾಂಧಿ ಬಜಾರಿನಲ್ಲಿ ಭಾರೀ ಗಾತ್ರದ ಇಟ್ಟಿಗೆಯ ಗೋಡೆಯೊಂದನ್ನ ಕಟ್ಟಬೇಕೆಂದು ನಿರ್ಧರಿಸಿದ.
ಇದನ್ನು ಹೇಗೆ ಮಾಡುವದು ಎನ್ನುವದರ ಕುರಿತು ಆತ ತುಂಬಾ ಚಿಂತಿಸಿದ ; ಇದಕ್ಕಾಗಿ ತರ್ಕಬದ್ಧವಾದ ಉಪಾಯಗಳನ್ನು ಹೂಡುತ್ತ ಹಲವಾರು ನಿದ್ರೆಗಳಿಲ್ಲದ ರಾತ್ರಿ ಕಳೆದ . ಕ್ರಮೇಣ , ಇವನ ವಿಚಾರಗಳನ್ನು ಅರಿತ ಹಲವಾರು ಚಿಂತಕರು ಮತ್ತು ಯಂತ್ರಕುಶಲಿಗಳ ಸಂಘವೇ ರೂಪುಗೊಂಡು ಅವರು ಈ ಗೋಡೆಯನ್ನು ಹೇಗೆ ಕಟ್ಟಬೇಕೆಂದು ತರ್ಕಗಳ ಸರಣಿ ಹೂಡಿ, ನಕ್ಷೆ ಸಿದ್ಧಪಡಿಸಿದರು . ಅವರ ತೀರ್ಮಾನದಂತೆ , ಎಲ್ಲರಿಗೂ ಅಚ್ಚರಿಯಾಗುವ ರೀತಿಯಲ್ಲಿ ಗೋಡೆಯನ್ನು ಜಾಸ್ತಿ ಟ್ರಾಫಿಕ್ ಇಲ್ಲದ ಇರುಳಿನಲ್ಲೆ ಕಟ್ಟಿ ಮುಗಿಸಬೇಕೆಂದೂ ಯೋಜಿಸಿಕೊಂಡರು . ಇದಕ್ಕಾಗಿ ಹಲವಾರು ಕಾರ್ಮಿಕರನ್ನು ಕಲೆ ಹಾಕಲಾಯಿತು . ಕೆಲಸದ ಹಂಚಿಕೆಯನ್ನು ಮಾಡಿಯಾಯಿತು . ನಗರದ ಅಧಿಕಾರಿಗಳ ಕಣ್ಣು ತಪ್ಪಿಸಿ ಯಾರ್ಯಾರು ಹೇಗೆ ಎಲ್ಲಿಲ್ಲಿ ಕೆಲಸ ಮಾಡಬೇಕು ಎನ್ನುವದ ಕುರಿತು ಸ್ಪಷ್ಟ ಆದೇಶವನ್ನು ಕಾರ್ಮಿಕರಿಗೆ ಕೊಡಲಾಯಿತು . ಇಷ್ಟು ಕರಾರುವಕ್ಕಾದ ಯೋಜನೆಯ ಫಲವಾಗಿ ಅವರು ಒಂದೇ ರಾತ್ರಿಯಲ್ಲಿ ಗೋಡೆ ಕಟ್ಟಿ ಮುಗಿಸಿದರು .
ಮಾರನೆಯ ದಿನ ಇಡಿಯ ಗಾಂಧಿ ಬಜಾರಿನಲ್ಲಿ ಗುಲ್ಲೋ ಗುಲ್ಲು .

ಆದರೆ ಅಷ್ಟು ಹೊತ್ತಿಗೆ ಈ ಗೋಡೆಯ ಮೂಲಯೋಜಕ ಮಾತ್ರ ಗಾಬರಿಯಿಂದ ಅಡಗಿಬಿಟ್ಟಿದ್ದ , ಕಾರಣ ಈ ಗೋಡೆಯಿಂದ ಏನು ಪ್ರಯೋಜನ ಎನ್ನುವದು ಮಾತ್ರ ಅವನಿಗೆ ಮರೆತುಹೋಗಿತ್ತು

                                           ಝೂಂಡ ಕತೆಗಳು :ಮಾಡುವದೇನು

ಒಂದು ದಿನ ಝೂಂಡ ಗುರುಗಳು ಏನನ್ನೂ ಮಾಡಲಿಲ್ಲ , ಗುರುಗಳನ್ನು ನೋಡಲು ಯಾವುದೇ ಶಿಸ್ಯರು ಬರಲಿಲ್ಲ ಹಾಗೂ ಗುರುಗಳು ಶಿಸ್ಯರನ್ನು ನೋಡಲು ಹೋಗಲಿಲ್ಲ . ಗುರುಗಳಿಗೆ ಪೆನ್ನು ಹಾಳೆ ಮತ್ತು ಪುಸ್ತಕ ಸಿಗದೇ ಇದ್ದ ಕಾರಣ ಅವರು ಏನನ್ನೂ ಬರೆಯಲಿಲ್ಲ ಹಾಗೂ ಓದಲಿಲ್ಲ . ಮಾಡಲಿಕ್ಕೆ ಏನು ಇರದ ಕಾರಣ ಇನ್ಯಾವದನ್ನು ಮಾಡಲಿಲ್ಲ ಏನನ್ನೂ ಮಾಡಲಿಕ್ಕಿರದ , ಯಾರೊಟ್ಟಿಗೂ ಇರದ ಕಾರಣ ಗುರುಗಳಿಗೆ ವಿಚಾರವನ್ನು ಮಾಡಬೇಕಾದ ಪ್ರಸಂಗ ಬರಲಿಲ್ಲ ಹಾಗೂ ಏನನ್ನು ವಿಚಾರ ಮಾಡದ ಕಾರಣದಿಂದ ಗುರುಗಳಿಗೆ ಸಂತೋಷವಾಗಲಿ ದುಃಖವಾಗಲಿ ಆಗಲಿಲ್ಲ.

ಗುರುಗಳು ಏನನ್ನು ಮಾಡದೆ ಇದ್ದುದರಿಂದ , ಗುರುಗಳು ಏನು ಮಾಡಿದರು ಎನ್ನುವದರ ಕುರಿತು ಝೂಂಡ ಶಿಸ್ಯರಲ್ಲಿ ಭಿನ್ನಭಿಪ್ರಾಯ ಹುಟ್ಟಿತು. ಗುರುಗಳು ಏನನ್ನು ಮಾಡಿರಬಹುದು ಎಂದು ಝೂಂಡ ಶಿಸ್ಯರು ಹಲವಾರು ವಿಧವಾಗಿ ಚರ್ಚೆ ಮಾಡಿದರು . ಗುರುಗಳೊಟ್ಟಿಗೆ ಏನೂ ನಡೆಯದ ಕಾರಣ , ಹಾಗೂ ಏನನ್ನು ಮಾಡದಿರುವುದರ ಚರ್ಚೆ ಮಾಡುತ್ತಿರುವದರಿಂದ ಕ್ರಮೇಣ ಶಿಸ್ಯರಿಗೆ ಯಾವ ವಿಷಯದ ಕುರಿತು ಚರ್ಚೆ ಮಾಡಬೇಕು ಎನ್ನುವದೇ ಮರೆತು ಹೋಯಿತು .

ದಯವಿಟ್ಟು ನಿಮಗೆ ಯಾರಾದರೂ ಒಂದಷ್ಟು ಜನ ವಿಷಯವಿಲ್ಲದೆ ಚರ್ಚೆ ಮಾಡುತ್ತಿದರೆ ಅವರಿಗೆ ಜ್ಞಾಪಿಸಿ ' ಗುರುಗಳು ಏನನ್ನು ಮಾಡದೆ ಇದ್ದುದರಿಂದ ಹಾಗೂ ಏನನ್ನು ಮಾಡದಿರುವ ಕಾರಣ ಏನು ಮಾಡಿದರು ಎಂದು ಚರ್ಚಿಸಲು ಕಾರಣವಿಲ್ಲ "


                                          ಝೂಂಡ ಕಥೆ : ಮುಕ್ತಿ

ಗುರುಗಳು ಗಾಂಧೀ ಬಜಾರಿನ ಕಡೆಗೆ ಹೊರಟಿದ್ದರು. ಎದುರಿಗೆ ಸಿಕ್ಕ ನಲವತ್ತಾರನೇ ಶಿಷ್ಯ ಕೇಳಿದ
"ಗುರುಗಳೇ , ಹೊರಟಿದ್ದೆಲ್ಲಿಗೆ ?"
"ಮನಸ್ಸು ತೋರಿದ ಕಡೆ " ಗುರುಗಳು ಮುನ್ನಡೆದರು 
ಸ್ವಲ್ಪ ಮುಂದೆ ಸಿಕ್ಕಿದ ಎಪ್ಪತ್ತಮೂರನೇ ಶಿಷ್ಯ ಕೇಳಿದ "ಗುರುಗಳೇ , ಹೊರಟಿದ್ದೆಲ್ಲಿಗೆ ?"
"ಹಾದಿ ತೋರಿದ ಕಡೆ " ಗುರುಗಳು ಮುನ್ನಡೆದರು
ಇನ್ನೂ ಸ್ವಲ್ಪ ಮುಂದೆ ಸಿಕ್ಕಿದ ಹದಿನಾಲ್ಕನೆಯ ಶಿಷ್ಯ ಕೇಳಿದ
"ಗುರುಗಳೇ , ಹೊರಟಿದ್ದೆಲ್ಲಿಗೆ ?"
"ಕಾಲು ಕರೆದೊಯ್ದಲ್ಲಿಗೆ " ಗುರುಗಳು ಸರಸರನೆ ನಡೆದರು
ಕೊಂಚ ದೂರದಲ್ಲಿ ಎರಡನೆಯ ಸಿಸ್ಯ ಸಿಕ್ಕಿದ
ಸಿಸ್ಯ ಗುರುಗಳನ್ನು ಏನನ್ನೂ ಕೇಳಲಿಲ್ಲ , ಗುರುಗಳು ಏನನ್ನೂ ಹೇಳಲಿಲ್ಲ .
ಸಿಸ್ಯ ಗುರುಗಳನ್ನು ಹಿಂಬಾಲಿಸಿದ.
ನೀವು ಗಾಂಧೀ ಬಜಾರಿನಲ್ಲಿ ಯಾರಾದರೂ ಸಿಸ್ಯನನ್ನೂ ನೋಡಿದರೆ ಅವನು ಎರಡನೆಯ ಸಿಸ್ಯನೇ ಹೌದು

                                             ಝೂಂಡ ಕಥೆ : ಸಂಭವನೀಯತೆ

ಸಿಸ್ಯನೊಬ್ಬನ ಬಳಿ ಮೇಕೆಯೊಂದಿತ್ತು . ಪ್ರತಿದಿನವೂ ಶಿಷ್ಯ ಯಾವುದಾದರೊಂದು ದಿಕ್ಕಿಗೆ ಅದನ್ನು ಕರೆದೊಯ್ದು ಹುಲ್ಲು ಮೇಯಿಸಿಕೊಂಡು, ಸಂಜೆಯಾಗುತ್ತಿದ್ದಂತೆ ಕೊಟ್ಟಿಗೆಗೆ ಕರೆದುಕೊಂಡು ಬರುತ್ತಿದ್ದ . ಚೆನ್ನಾಗಿ ತಿಂದುಂಡ ಮೇಕೆ ದಷ್ಟಪುಷ್ಟವಾಗಿ ಬೆಳೆಯತೊಡಗಿತು. ಹಾಗು ಅದನ್ನು ಮೇಯಸಲು ದೂರ ದೂರಕ್ಕೆ ಹೋಗುವದು ಅನಿವಾರ್ಯವಾಯಿತು . ದಿನಗಳು ಕಳೆದಂತೆ ಸಿಸ್ಯನಿಗೆ ವಯಸ್ಸಾಗತೊಡಗಿತು , ನಡೆದು ಮೇಕೆಯನ್ನು ಹಿಂಬಾಲಿಸಲು ಕಷ್ಟವಾದಂತೆ ಶಿಷ್ಯ ಒಂದು ಸೈಕಲ್ ಖರೀದಿಸಿದನು , ಅದೂ ಅಸಾಧ್ಯವಾದಂತೆ ಬೈಕ್ ಮೇಲೆ ಮೇಕೆಯನ್ನು ಹಿಂಬಾಲಿಸಲು ಪ್ರಾರಂಭಿಸಿದ. ಕೆಲವೇ ಸಮಯ ಅದೂ ಕಷ್ಟಕರವಾದಂತೆ ಶಿಷ್ಯ ಒಂದು ಕಾರನ್ನು ಖರೀದಿಸಿದ. ಗ್ರಾಮಾಂತರ ಪ್ರದೇಶದಲ್ಲಿ ರಸ್ತೆ ಸರಿಯಿಲ್ಲದುದರಿಂದ ಶಿಷ್ಯ ಕಾರು ಓಡಿಸಲು ಅನುಕೂಲಕರವಾಗುವಂತೆ ರಸ್ತೆಯನ್ನು ನಿರ್ಮಿಸಲು ಮುನ್ಸಿಪಾಲಿಟಿಗೆ ಪತ್ರ ಬರೆದ . ಸಿಸ್ಯನ ಅಹವಾಲನ್ನು ಕೇಳಿದ ಮುನ್ಸಿಪಾಲಿಟಿ , ಸರ್ವೇ ನಡೆಸಿ ಶಿಷ್ಯ ಕಾರಿನಲ್ಲಿ ಮೇಕೆಯನ್ನು ಹಿಂಬಾಲಿಸಲು ಅನುಕೂಲವಾಗುವಂತೆ ರಸ್ತೆ ನಿರ್ಮಾಣ ಮಾಡಿತು . ಇದಾಗಿ ಸ್ವಲ್ಪ ದಿನಗಳ ನಂತರ , ಒಂದು ರಾತ್ರಿ ಶಿಷ್ಯ ಮೇಕೆಯನ್ನು ವಾಪಸ್ಸು ಕೊಟ್ಟಿಗೆಗೆ ಕರೆದುಕೊಂಡು ಬರುವಾಗ ಅಸಾಧ್ಯ ವೇಗದಿಂದ ಕಾರನ್ನು ಓಡಿಸಿ , ನಿಯಂತ್ರಣ ತಪ್ಪಿ ಅಫಘಾತದಲ್ಲಿ ಮೃತಪಟ್ಟನು .
ಸರಿ , ಮುನ್ಸಿಪಾಲಿಟಿ ಕಡೆಯಿಂದ ಅಫಘಾತದ ಬಗ್ಗೆ ಒಂದು ತನಿಖೆ ಮಾಡಲಾಯಿತು. ತನಿಖೆಯ ಪ್ರಕಾರವಾಗಿ ರಸ್ತೆಯ ತಪ್ಪು ವಿನ್ಯಾಸವೇ , ಅಫಘಾತಕ್ಕೆ ಕಾರಣವೆಂದೂ , ರಸ್ತೆಯನ್ನು ವಿನ್ಯಾಸ ಮಾಡಿದ ಇಂಜಿನಿಯರ ಅಫಘಾತಕ್ಕೆ ಕಾರಣವೆಂದು ಘೋಷಿಸಲಾಯಿತು . ಕೊನೆಗೆ ರಸ್ತೆ ವಿನ್ಯಾಸ ಮಾಡಿದ ಇಂಜಿನಿಯರ ಯಾರೆಂದು ನೋಡಲಾಗಿ , ಅವನು ಮತ್ಯಾರೂ ಆಗಿರದೆ ಸಿಸ್ಯನ ಮೇಕೆಯೇ ಆಗಿತ್ತು

ಝೂಂಡ ಕತೆ : ಅವಕಾಶ

ಶಿಷ್ಯನ ಮನೆಯ ಬಾಗಿಲು ಹಾಕಿತ್ತು. ಗುರುಗಳು ಬಂದು ಬಾಗಿಲು ತಟ್ಟಿದರು .
"ಯಾರು ? " ಶಿಷ್ಯ ಕೇಳಿದ
ಗುರುಗಳು ಮಾತನಾಡಲಿಲ್ಲ. ಮತ್ತೆ ಬಾಗಿಲು ತಟ್ಟಿದರು 
"ಯಾರು ? " ಶಿಷ್ಯ ಒಳಗಿನಿಂದಲೇ ಕೇಳಿದ .
ಗುರುಗಳು ಮಾತನಾಡಲಿಲ್ಲ. ಮಗದೊಮ್ಮೆ ಬಾಗಿಲು ತಟ್ಟಿದರು
"ಯಾರು ? " ಶಿಷ್ಯ ಪುನಃ ಕೇಳಿದ
ಗುರುಗಳು ಮುನ್ನಡೆದರು .
ಶಿಷ್ಯ ಬಾಗಿಲು ತೆರೆದಾಗ ಯಾರು ಇರಲಿಲ್ಲ . ಈಗ ಶಿಷ್ಯ ಗುರುಗಳನ್ನು ಹುಡುಕುತ್ತ ಅಲೆಯುತ್ತಿದ್ದಾನೆ

ಝೂಂಡ ಕತೆ : ಅರಿವು

ಝೂಂಡ ಗುರುಗಳು ಒಳಗೆ ಕುಳಿತು ಓದುತ್ತಿದ್ದರು . ಹೊರಗಿನಿಂದ ಬಂದ ಶಿಷ್ಯ ಬಾಗಿಲು ತಟ್ಟಿದ .
"ಯಾರು?" ಗುರುಗಳು ಕೂತಲ್ಲಿಂದಲೇ ಕೇಳಿದರು
"ನಾನು " ಎ೦ಬತ್ತನೇ ಶಿಷ್ಯ ಅವನ ಹೆಸರನ್ನು ಹೇಳಿದ 
"ಯಾರು?" ಗುರುಗಳು ಮತ್ತೆ ಕೇಳಿದರು
"ನಾನು " ಎ೦ಬತ್ತನೇ ಶಿಷ್ಯ ಅವನ ಹೆಸರು ಮತ್ತು ಪರಿಚಯ ಹೇಳಿದ
"ಯಾರು?" ಗುರುಗಳು ಮತ್ತೆ ಕೂಗಿದರು
ಶಿಷ್ಯ ಮತ್ತೆ ಅವನ ಹೆಸರು ಮತ್ತು ಪರಿಚಯ ಹೇಳಿದ .
"ಯಾರು ?" ಮರು ಪ್ರಶ್ನೆ ಗುರುಗಳಿಂದ
ಶಿಷ್ಯ ಮತ್ತೆ ಉತ್ತರಿಸಿದ
"ಯಾರು ? " ಗುರುಗಳು ಪುನಃ ಕೇಳಿದರು
"ಗೊತ್ತಿಲ್ಲ ಗುರುಗಳೇ " ಶಿಷ್ಯ ಉತ್ತರಿಸಿದ
ಗುರುಗಳು ಬಂದು ಬಾಗಿಲು ತೆರೆದರು

ಆಂಗ್ಲ ಝೂಂಡ ಕತಾನುವಾದ

ಝೂಂಡ ಗುರುಗಳು ಗಾಂಧೀ ಬಜಾರಿನ ಮಾರ್ಗವಾಗಿ ಎತ್ತಲೋ ಹೊರಟಿದ್ದರು ಎದುರಿಗೆ ಸಿಕ್ಕ ಹದಿನೇಳನೇ ಝೂಂಡ ಶಿಷ್ಯ ಗುರುಗಳನ್ನು ಕೇಳಿದ
" ಗುರುಗಳೇ ಕತ್ತಲು ಮೊದಲೋ ಬೆಳಕು ಮೊದಲೋ ?"
"ಬೆಳಕು" ಎಂದರು ಗುರುಗಳು 
"ಯಾಕೇ?" ಶಿಷ್ಯ ಪ್ರಶ್ನಿಸಿದ
"ಯಾಕೆಂದರೆ ಕತ್ತಲಲ್ಲಿ ಏನು ಕಾಣಿಸುವದಿಲ್ಲ " ಉತ್ತರಿಸಿ ಗುರುಗಳು ನಡೆದರು .

ಝೂಂಡ ಕತೆ : ಮುಕ್ತಿ

ಝೂಂಡ ಗುರುಗಳು ಗಾಂಧೀಬಜಾರಿನ ಮೂಲಕ ಎತ್ತಲೋ ಹೊರಟಿದ್ದರು. ಎದುರಿಗೆ ಸಿಕ್ಕ ಹತ್ತನೆಯ ಸಿಸ್ಯ ಗುರುಗಳನ್ನು ಗುರುತು ಹಿಡಿಯದೇ ಪ್ರಶ್ನಿಸಿದ : " ತಾವ್ಯಾರು?"
"ಗೊತ್ತಿಲ್ಲ" ಗುರುಗಳು ಉತ್ತರಿಸಿದರು.
ಓಹೋ! ಹಾಗಾದರೆ ತಾವು ಬಂದ್ದದು ಎಲ್ಲಿಂದ" ಸಿಸ್ಯ ಕೇಳಿದ
"ಗೊತ್ತಿಲ್ಲ " ಗುರುಗಳು
"ಅದೂ ಗೊತ್ತಿಲ್ಲವೇ! ಇರಲಿ , ತಾವು ಹೋಗುತ್ತಿರುವುದಾದರೂ ಎಲ್ಲಿಗೆ ಗೊತ್ತಿದೆಯೋ"
"ಗೊತ್ತು" ಉತ್ತರಿಸಿದ ಗುರುಗಳು ಹೊರಟು ಹೋದರು
ಸಿಸ್ಯ ನಿಗೆ ಜ್ಞಾನೋದಯವಾಯಿತು.