Friday, December 24, 2010

ಅವಸ್ಥೆ..!

ಎಲ್. ಕೇಮಚಂದ್ರ ಉಡುಪರು ಬರೆದ ಇತ್ತೀಚಿಗಿನ ಕವಿತೆ.

ಪ್ರೇಮದಾಚೆಗಿನ ಅವಸ್ಥೆ :
ಅಳುವಿನಂತ:ಪುರದೊಳಗೆ ನಾನೊಬ್ಬನೇ
ಒಬ್ಬಂಟಿ ; ಸುತ್ತ
ಕತ್ತಲೆಯ ಶ್ವಾಸ , ಗಾಢ
ಅಂಧಕಾರದೊಳಗೊಣ ಎನ್ನ ನಿಶ್ವಾಸ
ದು:ಖ ದುಗುಡ ದುಮ್ಮಾನ ತುಂಬಿದೆರಡು
ಕಂಗಳ ಮಧ್ಯೆ ನಾನೊಬ್ಬನೇ ಒಬ್ಬಂಟಿ.!
ನಾಲಿಗೆಯಾಡಿಸಿದರೆ ಉಪ್ಪುಪ್ಪು
ನಿನ್ನ ನೆನಪಿನ ಹನಿಗಳ ಆವಿ
ತುಟಿಯಮೇಲೆ ಒಂಟಿ .!

ಉಸಿರ ಹೀರಿ ಹಿಡಿದು , ಕೋಶ ಸುಡಲೆಂದು
ಒಳಗೆಳೆದ ಆಮ್ಲಜನಕ , ಹೊರಬಿಡುವಾಗ ಇಂಗಾಲ
ಜೀವ ಸುಟ್ಟು ದಹದಹಿಸಿ ಹೊರಬಿಡುವಂತೆ
ಒಳಗೆಳೆದ ಪ್ರೇಮ ಒಳಗೊಳಗೆ ಬೆಂದು , ಸುಟ್ಟು
ಹೊರಬಿಡುವ ಹಾದಿ ನಿನ್ನ ನೆನಪುಗಳ ಶವ.!

ಕಿಟಕಿಗಳೇ ಇಲ್ಲ ಅಳುವಿನಂತ:ಪುರ
ದೊಳಗೆ ; ಬರಲೊಂದು ಬಾಗಿಲು ಹೋಗಲು
ಧುತ್ತನೆ ನಿಂತ ಗಹಗಹಿಸುವ ನಿನ್ನ ಪ್ರೇಮ ಕಳೇಬರ.!
ನಿದ್ರೆ ಬರದ ರಾತ್ರಿಗಳು
ಕನವರಿಸುತ್ತವೆ , ಹೇಳು ಸಖಿ
ನಿನ್ನ ಕಂಗಳು ಮೊದಲಿಂತೆ ವಜ್ರವಾ?

ಒದ್ದು ನಡೆದ ಎದೆಯ ಪ್ರೇಮ
ಕವಾಟ ; ತುಂಬಿದೆ ಸುಟ್ಟ ನೆನಪ ಬೂದಿ
ಅಳುವಿನಂತ:ಪುರವೇ ಹಾಗೆ
ಸತ್ತು ಸುತ್ತ ಶೇಷ ಬೂದಿ ; ಸೇರಿ ಕಣ್ಣೀರು
ಮತ್ತೆ ಹಸಿ ಹಸಿ
ಹಸಿಗೊ೦ದು ಆಕಾರ
ನಿನ್ನ ನೆನಪಿನ ವಿಕಾರ.!-- 


ಎಲ್. ಕೇಮಚಂದ್ರ ಉಡುಪರ ಸಂದರ್ಶನ ಮೊದಲಿನ ಪೀಠಿಕೆ :"ನಮಸ್ಕಾರ"
"ಹ್ಚೋ.! ನಮಸ್ತೇ.. ಬಂದಿರಾ? ಬನ್ನಿ ಒಳಗೆ. ಕುಳಿತುಕೊಳ್ಳಿ"
( ನಗು )
"ಯಾರು ಅವರನ್ನು ನೋಡಬೇಕಿತ್ತೋ?"
"ಹ್ಚ ಅವರನ್ನೇ. ಮೊನ್ನೆ ಅವರ ಕವಿತೆ ಓದಿದೆ "ಪ್ರೇಮದಾಚೆಗಿನ ಅವಸ್ಥೆ " ಹಾಗೆ ಒಂದಷ್ಟು ಮಾತನಾಡಿಕೊಂಡು ಹೋಗುವ ಅನ್ನಿಸಿತು ಬಂದೆ"
"ಹೌದೇ?"
"ಹ್ಮ್"
"ಓಹೋ"
" ನೀವು ಅವರೊಟ್ಟಿಗೆ ಇರುವುದಾ?"
"ಯಾರು? ನಾನಾ? ನೀವು ಏನು ಕೇಳಿದಿರಿ ಎಂದು ಅರ್ಥವಾಗಲಿಲ್ಲ?"

"ಅದೇ. ನೀವು ಅವರ ಮನೆಯವರಾ?"
"ಹ್ಸೆ.. ಹಾಗೆಂದರೆ ಹಾಗೆ. ಹೀಗೆಂದರೆ ಹೀಗೆ" (ನಗು)
"ಹ್ಮ್"
(ಮೌನ )
ಇರಲಿ ಬಿಡಿ ಅವರು ಬರುವ ಹೊತ್ತಾಯಿತು. ಸ್ನಾನ ಮುಗಿಸಿ ಬರುತ್ತಾರೆ. ಅಷ್ಟರಲ್ಲಿ ನಿಮಗೆ ಕುಡಿಯಲು ಏನಾದರೂ ತರಲೆ?"
" ಛೇ ಛೇ ಬೇಡ ಬೇಡ ನಿಮಗೇಕೆ ತೊಂದರೆ?"
"ತೊಂದರೆಯಾ? ಹೌದೋ?"
(ಪಕಪಕನೆ ನಗು)
ಅವರು ಒಳಗೆ ನಡೆದರು.

ಒಳಗೆ ನಡೆದವರು ಏನೋ ಗೊಣಗಿಕೊಂಡಂತೆ ಇತ್ತು. ಅವರು ಒಳಗೆ ನಡೆದ ಹಾದಿಯಲ್ಲಿರುವ ಬಾಗಿಲಿನಿಂದ ಸಣ್ಣಗೆ ಹರಡಿರುವ ಕತ್ತಲೇ , ಹೊರಗಿರುವ ನಾನು ಕುಳಿತುಕೊಂಡ ಕಾಲು ಮಂಚದವರೆಗೂ ಹರಡಿ . ಬೆಳಕು ತಾಕಿದಕ್ಷಣ ಸರ್ರನೇ ಮಾಯವಾಗುತ್ತಿತ್ತು. ಒಳಗೆ ಬೆಳಕಿಲ್ಲದಿರುವದರಿಂದ ಕತ್ತಲೆಯೋ ಅಥವಾ ಹೊರಗೆ ಕತ್ತಲೆಯಿಲ್ಲದಿರುವದರಿಂದ ಬೆಳಕೋ ಎಂಬ ಸಂದೇಹ ನನ್ನ ಮನಸ್ಸಿನಲ್ಲಿ ಥಟ್ಟನೆ ಮೂಡಿ ಮಾಯವಾಯಿತು. ಮನೆಯ ಮೂಲೆಗಳಲ್ಲಿ ಸೂರು ಕಟ್ಟಿಕೊಂಡ ಇರುವೆಗಳು ಹೊರ ಹಾಕಿದ ನುಣುಪು ಮಣ್ಣು ಶೇಖರವಾಗಿತ್ತು. ಜಗುಲಿಗೆ ತಾಕಿ ಕೊಂಡಂತೇ ಇರುವ ಚಿಕ್ಕದಾದ ಓಣಿಯಂತ ಪ್ರದೇಶದಲ್ಲಿ ಧೂಳಿನಂತಹ ಪದಾರ್ಥ ಹೌದೋ ಅಲ್ಲವೋ ಎಂಬಂತೆ ಪವಡಿಸಿತ್ತು.

ಹಳೆಯ ಕಾಲದ ಮನೆಯ ಛಾವಣಿಯ ಅಡಿಗಳು ಭಾವವಿಲ್ಲದೆ ಹುಳುಗಳ ಕೊರೆತ ಸಹಿಸುತ್ತಾ ನಿಂತಿದ್ದವು. ನಾನು ಕಾಲು ಮಂಚದ ಮೇಲೆ ಸ್ಥಾಪಿಸಿದ್ದ ನನ್ನ ದೇಹದ ಕೈಗಳನ್ನ ಮಂಚಕ್ಕೆ ಒತ್ತುತ್ತ ಅವರ ಬರುವಿಕೆಗೆ ಕಾಯತೊಡಗಿದೆ.
ಮತ್ತೊಂದಿಷ್ಟು ಸಮಯ ಭೂತಕಾಲದ ಅಡಿಯೊಳಗೆ ಪ್ರತಿಷ್ಟಾಪನೆ ಆದ ಮೇಲೆ ಅವರು ಮನೆಯೊಳಗಿನಿಂದ ಉಗಮವಾದಂತೆ ಹೊರ ಬಂದರು.

ಎಲ್. ಕೇಮಚಂದ್ರ ಉಡುಪರೊಡನೆ ಮಾತುಕತೆ:
ನಾನು
: ನಮಸ್ಕಾರ, ಬಹಳ ಮೊದಲಿನಿಂದಲೂ ನಿಮ್ಮ ಅಭಿಮಾನಿ.  ನಿಮ್ಮ ಕವನಗಳನ್ನು ಓದಿದ್ದೇನೆ , ಅಭ್ಯಸಿಸಿದ್ದೇನೆ . 'ವಿಲಕ್ಶ್ಯಣ ಕವಿತೆಗಳು- ಕವಿಗಳು" ಎಂಬ ಪುಸ್ತಕ ಬರೆಯ ಬೇಕೆಂದಿರುವೆ. ಬರೆಯುವ ಮೊದಲು ನಿಮ್ಮ ಭೇಟಿಯಾದರೆ ಹೇಗೆ ಅನ್ನಿಸಿತು ಇಲ್ಲಿ ಬಂದೆ.
ಕೇಮ: ಓಹ್.! ಹೌದೇ ಸಂತೋಷ
( ಮುಖದಲ್ಲಿ ಗಂಟು ಹಾಕಿದ ಭಾವನೆಗಳಿಲ್ಲ)
ನಾನು : ನಿಮ್ಮ ಕವಿತೆಗಳ ಮಂಥನಗಳಿಗೆ ಹಲವಾರು ಬಾರಿ ಪತ್ರಗಳನ್ನು ಬರೆದಿದ್ದೆ.
ಕೇಮ" ಅರೆ..! ಅದು ನೀವಾ?"
( ಆಶ್ಚರ್ಯ ಸುಳಿದು ಮಾಯ)
ನಾನು: ಹೌದು . ನಾನೇ. ಒಮ್ಮೆ ಎಲ್ಲೋ ಓದಿದ ಹಾಗೆ ನೆನಪು.  ನಿಮ್ಮ ಮೊದಲ ಕವನ "ಅವಸ್ಥೆಯ ಅಡಿಗಳು" ಅದರ ಟಿಪ್ಪಣಿಯಲ್ಲಿ ನೀವೇ ಹೇಳಿದ್ದಿದ್ರಿ. ನಿಮ್ಮ ಕವಿತೆಗಳು ಭಾವಗಳ ಪ್ರತೀಕ ಅಲ್ಲವೆಂದು , ಅವು ಭಾವನೆಗಳಲ್ಲವೆಂದು , ಭಾವಕ್ಕೂ ಕವಿತೆಗೂ ಸಂಭಂದ ಇಲ್ಲವೆಂದು. ಕವಿತೆಗಳೆಲ್ಲ ಅವಸ್ಥೆಯೆಂದು. ಅವಸ್ಥೆಯ ತೀವ್ರತೆ ಪ್ರಕಟವಾಗುವದೇ ಕವಿತೆಗಳೆಂದು. ಹಾಗಾದರೆ ನಿಮ್ಮ ಪ್ರಕಾರ ಕವಿತೆಗಳು ಅವಸ್ಥಾ ರೂಪ ಮಾತ್ರವೋ?

ಕೇಮ": ಹ್ಮ್.! ಹೇಳಿದ್ದೆ. ಈಗಲೂ ಹೇಳುತ್ತೇನೆ.
(ಒಂದು ಕ್ಷಣ ಮೌನ. ಉಸಿರು ಏರುಪೇರು ಇಲ್ಲದೇ ಒಳಗೆ ಹೊರಗೆ)
ಹಾಗಾದರೆ ಅವಸ್ಥೆ ಎಂದರೇನು ಎಂದು ಯಾವತ್ತಾದರೂ ವಿಚಾರ ಮಾಡಿದ್ದೀರೋ?
ಇಲ್ಲ ನೀವು ಹಾಗೆ ಮಾಡಲಾರಿರಿ (ಸ್ವಗತ)
ಒಬ್ಬ ಮನುಷ್ಯ ಅವನ ಲುಪ್ತ ಕಾಲದಲ್ಲಿ ಅಥವಾ ಬದುಕಿನ ಆವರ್ತನಗಳಲ್ಲಿ ಅನುಭವಿಸಿದ ಯಾ ಹಾದು ಬಂದ ಘಟನೆಗಳು ಅವಸ್ಥೆಯಾಗಿರಲು ಬಹುದು. ಅಥವಾ ಇನ್ನೊಂದು ವಿಧದಲ್ಲಿ ಹೇಳಲೇ? ಅವಸ್ಥೆಯೊಂದು ಮನುಷ್ಯನ ಮನಸ್ಸಿನ ಪಲ್ಲಟ. ಮಾನಸಿಕವಾಗಿ ಉತ್ಪಾಟಗಳಾದಾಗ , ಮನಸ್ಸಿನಲ್ಲಾಗುವ ಬದಲಾವಣೆಗಳು , ತನ್ಮೂಲಕ ಪರ್ಯಾಯ ಭೌತಿಕ ಬದಲಾವಣೆಗಳು , ನಮ್ಮದೇ ಬಿಂದುವಿನಲ್ಲಿ ಘನಿಭೂತವಾಗುತ್ತಾ , ಆ ಬಿಂದುಗಳೆಲ್ಲ ಸೇರಿ ಒಂದು ಕೇಂದ್ರವಾಗಿ , ಕೇಂದ್ರವು ತನ್ನದೇ ಆಯಾಮಗಳನ್ನು ದಾಟಿ , ಪರ್ಯಾಯಗಳನ್ನು ರೂಪಿಸುತ್ತಾ ಹೋಗುತ್ತದಲ್ಲ ಅದೇ ತಲ್ಲಣ. ಈ ತಲ್ಲಣಗಳ ವರ್ತಮಾನವಿದೆಯಲ್ಲ ಅದೇ ಅವಸ್ಥೆ. ಇಂತಹ ಅವಸ್ಥೆಗಳು ಕೆಲವೊಮ್ಮೆ ಕಾಲಘಟ್ಟದಲ್ಲಿ ಬದಲಾಗುತ್ತ ಹೋಗುತ್ತದೆ. ಅವಸ್ಥೆಗಳ ಗೋಚರ ರೂಪ ಶಬ್ಧಗಳಾಗಿರಬಹುದು , ಕ್ರಿಯೆಗಳಾಗಿರಬಹುದು ಅಥವಾ ನನ್ನಲ್ಲಿ ಇರುವ ಹಾಗೆ ಅಕ್ಷರಗಳಾಗಿರಬಹುದು.

ನಾನು : ಹ್ಮ್.! ಇರಬಹುದೇನೋ? ಅದಕ್ಕೆ ನಿಮ್ಮ ಕವಿತೆಗಳು ಮನುಷ್ಯನ ಒಳ ಅವಸ್ಥೆಗಳನ್ನ ಜ್ವಲಿಸುತ್ತವೆ.
ಕೇಮ: (ನಗು.. ಸಣ್ಣಗೆ.. ಹಾಗೆ ಬಂದು ಹೀಗೆ ಹೋದ ವಿಷಾದ) ಇಲ್ಲ ನಾನು ಕವಿತೆಗಳನ್ನ ಜ್ವಲಿಸುವದಿಲ್ಲ.. ಸ್ಖಲಿಸುತ್ತೇನೆ..! ಅವಸ್ಥೆಗಳನ್ನ ಮರೆಯಲು ತಲ್ಲಣಗಳನ್ನು ಸ್ಖಲಿಸುತ್ತೇನೆ..! ನೀವು ಸುಖದ ತುತ್ತ ತುದಿಯಲ್ಲಿ ಸ್ಖಲಿಸುವದಿಲ್ಲವೇ..? ಹಾಗೇ ನಾನು ದು:ಖದ ತುತ್ತ ತುದಿಯಲ್ಲಿ ಸ್ಖಲಿಸುತ್ತೇನೆ..! ನೀವು ಕೇಮ ಉಡುಪನ ಕವಿತೆಗಳು ಸುಡುತ್ತವೆ ಎನ್ನುತ್ತೀರಿ. ಇಲ್ಲ ನಾನು ಸುಡುವದಿಲ್ಲ. ನಾನು ಸುಡಲ್ಪಡುತ್ತೇನೆ. ನನ್ನದೇ ಮುಖವಾಡಗಳ ಒಳಗೆ , ನಾನು ಮರೆತ ಮುಖವಾಡಗಳ ಒಳಗಿನ ಮುಖದೊಳಗೆ , ತೊಟ್ಟ ಮುಖವಾಡದ ಮೇಲೆ.. ತಲ್ಲಣಗಳಿಂದ ಕಲೆ ಕಲೆಯಾದ ಮುಖದ  ಒಳಗೆ ಸುಡಲ್ಪಡುತ್ತೇನೆ. ನಾನೊಬ್ಬನೇ ಅಲ್ಲ ಎಲ್ಲರೂ ಹೀಗೆ ಉರಿಯುತ್ತಿರುತ್ತಾರೇನೋ? ಎಲ್ಲರೂ ಕುಂಡವೇ .. ಅಗ್ನಿ ಕುಂಡವೇ..!  ಕೆಲವರದು ದಗಧಗಿಸಿ ಉರಿಯುವ ಕುಂಡ .. ಕೆಲವರದು ಮುಚ್ಚಿದ ಕೆಂಡ..! ಉರಿ ಒಳಗೊಳಗೆ ಹೊತ್ತಿ ಕುಲುಕುತ್ತದೆ. ಉರಿದಷ್ಟು ಸುಟ್ಟಶ್ಟು ಮತ್ತೆ ಮತ್ತೆ ಅಕ್ಷಯವಾಗುವ ನೆನಪಿನ ಸೌದೆಗಳು.. ಸುಟ್ಟ ಬೂದಿಯಿಂದಲೇ ಮತ್ತೆ ಸೌದೆಗಳು.. ಮತ್ತೆ ಸೌದೆಗಳ ಸುಡುವ ಕ್ರಿಯೆ.. ನನ್ನದೇ ಅವಸ್ಥೆಯ ಶೇಷಗಳು , ಶೇಷ ನೆನಪುಗಳು ಹತ್ತಿಕೊಂಡು , ಸುತ್ತಿಕೊಂಡು , ತಬ್ಬಿಕೊಂಡು , ಉಬ್ಬಿಕೊಂಡು , ಅವುಚಿ - ಕವುಚಿ ಉರಿದುರಿದು ಧಗಧಗಿಸುತ್ತವೆ.. ನಾನು ಬೇಯುತ್ತೇನೆ.. ಅವಸ್ಥೆಗಳಲ್ಲಿ .. ಅವುಗಳ ಶೇಷ ಸೌದೆಗಳಲ್ಲಿ.... ಬೆಂಡು ಬೆಂದಂತೇ ಮತ್ತೆ ಮತ್ತೆ ಬರಡಾಗುವ ಬೆಂಡು.. ಉರಿ ತಡೆಯಲಾರದೇ ಶೇಷ ಬೂದಿ ನೆನಪುಗಳನ್ನ ಅಕ್ಷರ ರೂಪದಲ್ಲಿ ಕಕ್ಕುತ್ತೇನೆ... ನೀವು ನನ್ನ ಉರಿಯಲ್ಲಿ ತೃಪ್ತಿ ಪಡುತ್ತೀರಿ..!! ಹಾಯ್..! ದೇವರೇ ಉರಿ ತಡೆಯಲಾರೆ ಸ್ವಲ್ಪ ಗಾಳಿ ಹಾಕುತ್ತೀರಾ?? ಉರಿ ಶಮನವಾಗಲಿ .....
ನಾನು : ಸಮಾಧಾನ..! ಸುಧಾರಿಸಿಕೊಳ್ಳಿ..

( ಗಾಳಿ ಹಾಕುವ ಸಮಾಧಾನ ಮಾಡುವ ಯತ್ನ)
ಕೇಮ: ಇರಲಿ ಬಿಡಿ.. ಗಾಳಿ ಹಾಕಿದಷ್ಟು ಬೆಂಕಿ ಉರಿಯುವದು ಹೆಚ್ಚು..!
( ಸ್ವಲ್ಪ ಹೊತ್ತು ಮೌನ. ಅವರು ಎದ್ದು ಅತ್ತ ಇತ್ತ ಓಡಾಡಿದರು. ಹೊರಗೆ ಹೋಗಿ ಮುಖ ತೊಳೆದು ಬಂದರು. ಗಟ-ಗಟನೆ ನೀರು ಕುಡಿದರು.)
ನಾನು: ( ಹಿಂಜರಿಕೆ) ನೀವು ನಿಮ್ಮನ್ನು ಕವಿತೆಗಳಿಗೆ ಮಾತ್ರ ಸೀಮೀತ ಮಾಡಿಕೊಂಡಿರಲ್ಲಾ? ಇದರ ಬಗ್ಗೆ ನಾನು ಹಲವಾರು ಬಾರಿ ಆಕ್ಷೇಪಿಸಿ ಪತ್ರ ಬರೆದಿದ್ದೆ.. ನೀವು ಕತೆ ಬರೆಯುವ ಪ್ರಯತ್ನ ಮಾಡಲೇ ಇಲ್ಲವೇ? ಅಥವಾ ಇಷ್ಟವಿಲ್ಲವೇ?

ಕೇಮ: ( ಒಂದು ಕ್ಷಣ ಮೌನ , ದೃಷ್ಟಿ ವಕ್ರ ವಕ್ರ.. ಕೈ  ಬೆರಳುಗಳಲ್ಲಿ ಒಂದು ಕಿವಿಯೊಳಗೆ ಪ್ರಯಾಣಿಸಿತು. ಕೆಮ್ಮಿದರು. ದಿಟ್ಟಿಸಿದರು) ಭಯ..!! ಕತೆಗಳ ಬರೆಯಲು ಭಯ..! ಕವಿತೆಗಳ ಕಳೆದುಕೊಳ್ಳುವನೋ ಎಂಬ ಭಯ? ಕವಿತೆಗಳಿಗೆ ಅಕ್ಷರಗಳು ಖಾಲಿಯಾದರೆ ಎಂಬ ತಲ್ಲಣ..! ಆತಂಕಾವಸ್ಥೆ..!
ನಾನು : ಅರ್ಥವಾಗಲಿಲ್ಲ??
ಕೇಮ: ಅರ್ಥವಾಗುವದು ಇಲ್ಲ.! ನಿಮಗೆ ಮಾತ್ರವಲ್ಲ ಯಾರಿಗೂ.. ಅರ್ಥವಾಗುವದಿಲ್ಲ..! ಅವರಿಗೆ ಇವರಿಗೆ ಎಲ್ಲರಿಗೆ..!
ನಿಮ್ಮ ಹಾಗೆ ಅರ್ಥವಾಗುವುದಿಲ್ಲವೆಂದು ಅವಳು ಬಿಟ್ಟು ಹೋದಳು..! ಅವಳಿಗಾಗಿ ಅರ್ಥ ಹುಡುಕುತ್ತಾ,, ನಾನು ನನ್ನದೇ ಕುಲುಮೆಯಲ್ಲಿ ಕಳೆದುಹೋದೆ..
ಅವಳಿಗೆಲ್ಲಿ ಪ್ರೀತಿ ಕಡಿಮೆ ಆದಿತೊ ಎಂದು ಬೇರೆಯವರನ್ನು ಪ್ರೀತಿಸುವದ ಬಿಟ್ಟೆ.. ದ್ವೇಷಿಸಿದೆ.. ಉಳಿದವರ ದ್ವೇಷಿಸಿ ಇವಳಿಗೆ ಪ್ರೀತಿ ಹರಿಸಿದೆ.. ಅವಳ ಪ್ರೀತಿಸಲು ಎಲ್ಲರ ದೂರಮಾಡಿದೆ..!

ನಾನು: ಹೌದೇ?
ಕೇಮ:  ಅವಳಿಗಾಗಿ ಕೊಚ್ಚಿಕೊಂಡು ಬಿಚ್ಚಿಕೊಂಡು ಹಚ್ಚಿಕೊಂಡು ಹೋದೆ. ಪ್ರೀತಿಯಿಂದ ಪ್ರಾರಂಭವಾದ ಅವಸ್ಥೆ ಕಾಮವಾಯಿತು.. ಕಾಮದವಸ್ಥೆಯಡಿಯಲ್ಲಿ ಪ್ರೇಮದವಸ್ಥೆಗೆ ಅಂಗವಿಕಲ ಸ್ಥಾನ. ಕೊನೆಗೊಂದು ದಿನ ಎಲ್ಲ ಶೂನ್ಯ..! ಶೂನ್ಯಾವಸ್ಥೆ. ಅವಳು ನನ್ನ ಅವಸ್ಥೆ ದಾಟಿ ನಡೆದಿದ್ದಳು.
ಆಗ ಬರೆಯಲು ಆರಂಭಿಸಿದೆ. ನನ್ನ ಸೋಲಿಗೆ..!  ಅವಳ ಪ್ರೀತಿಸಿದ್ದು ಸರಿಯೆಂಬ ಛಲಕ್ಕೇ .. ಅವಳ ಪ್ರೀತಿಸಿದಂತೆ ಕವಿತೆಗಳ  ಪ್ರೀತಿಸಿದೆ.. ಉಳಿದವರ ದ್ವೇಷಿಸಿದಂತೆ ಕಥೆಗಳ ದ್ವೇಷಿಸಿದೆ.. ಅವಳ ಮೇಲಿನ ಸಿಟ್ಟು ಕತೆಗಳ ಮೇಲೆ.. ಅವಳಿಗೆ ಕಾದಿಟ್ಟ ಪ್ರೀತಿ ಕವನಕ್ಕೆ..!! ಕವಿತೆಗಳಿಗೆ..
ಒಳಗೊಳಗೆ ಉರಿದುರಿದು ಮುಚ್ಚಿ ಮುಚ್ಚಿ , ಕೊಚ್ಚಿ ಕೊಚ್ಚಿ ಸಾಯುವ ವಿಚಿತ್ರಾವಸ್ಥೆಯ ವಿಲಕ್ಷಣ ಆಸೆಯ ಮುಂದೆ ಕುಳಿತು ನಾನು ಬೇಯಿಸಿದ ಭಗ್ನ ಕಿಡಿಗಳನ್ನ ನೀವು ಕವಿತೆ ಎಂದಿರಿ.. ವಿಕ್ಷಿಪ್ತ ಎಂದಿರಿ.. ನನ್ನ ಭಗ್ನ ಕುರೂಪ , ನನ್ನ  ಪಲ್ಲಟ, ನನ್ನ ತಲ್ಲಣ , ನನ್ನ ಬೇಗುದಿ , ನನ್ನ ಕೆಂಡಡೊದಲ  ಭೂತದವಸ್ಥೆ ಇವನ್ನು ಒಳಗೊಂಡ ವರ್ತಮಾನದ ಅವಸ್ಥೆಗೆ ನಾನು ಅಕ್ಷರಗಳ ರೂಪ ಕೊಡಲಾರಂಬಿಸಿದೆ. ನನ್ನ ಊಳಿಡುವಿಕೆಯನ್ನ ನೀವು ಮೈಮರೆತು ಕೇಳಲಾರಂಭಿಸಿದಿರಿ. ನಾನು ನನ್ನದೇ ಕುರೂಪ  ನನ್ನದೇ ಸ್ವರಗಳಿಗೆ ಬೆಚ್ಚಿದಂತೆ ನೀವು ಮೆಚ್ಚುತ್ತಾ ಹೋದಿರಿ..! ನಾನು ಅವಸ್ಥೆಯೊಳಗೆ ಅವಸ್ಥೆಯಾಗುತ್ತ ಹೋದೆ. ಒಂದರ ಮುಂದೆ ಒಂದು ಎದುರುಬದುರಾಗಿ ಇತ್ತ ಕನ್ನಡಿಯ ಪ್ರತಿಬಿಂಬಗಳ ಹಾಗೆ ನಾನು ನನ್ನೊಳಗೆ ನಾನಾಗುತ್ತಲೇ , ನನ್ನದೆ ಬಿಂಬಗಳ ಮರೆಯುತ್ತಾ ಪ್ರತಿಬಿಂಬಗಳಾಗುತ್ತಾ ಹೋದೆ.
( ಅವರು ತಟ್ಟನೆ ಮಾತು ನಿಲ್ಲಿಸಿದರು , ಅತ್ತಿತ್ತ ನೋಡಿದರು ತಲೆ ಕೊಡವಿ ಮತ್ತೆ ಏನೋ ಹೊರಟು ಸುಮ್ಮನಾದರು. ಕತ್ತಲು ಬೆಳಕು ಸೇರುವಲ್ಲಿ ಹೋಗಿ ನಿಂತು ನೋಡಿದರು. ಬೆಳಕು ನೋಡಿ ಬೆಚ್ಚಿ ಬಿದ್ದವರಂತೆ ಮತ್ತೆ ಕತ್ತಲಿಗೆ ಬಂದರು ಮತ್ತೆ ನನ್ನೆಡೆಗೆ ಬಂದು ಕತ್ತು ಬಗ್ಗಿಸಿ ಮಾತು ಮುಗಿಯಿತು. ಟೀ ಕುಡಿದು ಹೋಗಿ ಎಂದರು)
ಅವರು ಕತ್ತಲೆಯೊಳಗೆ ಲೀನವಾಗುತ್ತಾ ಹೋಗಿ , ಅವರೇ ಕಟ್ಟಿಕೊಂಡಿದ್ದ ಅವರ ಅವಸ್ಥೆಯ ಒಳಗೆ ಮಾಯವಾದರು.
ನಾನು ಕೇಳಲೇ ಬೇಕಾಗಿದ್ದ ಹಲವು ಪ್ರಶ್ನೆಗಳು , ಅವರ "ಪ್ರೇಮದಾಚೆಗಿನ ಅವಸ್ಥೆ " ಕವನದ ದ್ವಂದ್ವಗಳ ಬಗೆಗಿನ ಸಂದೇಹ ಎಲ್ಲವೂ ತ್ರಿಶಂಕಾವಸ್ಥೆಯಲ್ಲಿ ನನ್ನಲ್ಲೇ ಜೋತಾಡುತ್ತ ಗಹಾಗಹಿಸ ತೊಡಗಿದವು.

No comments:

Post a Comment