Monday, September 24, 2012

ತಿಂಗಳಿಗೊಂದು ಪುಟ #4


ವೃತ್ತ - ಹೆಸರು

 
ಎಕ್ಸ್ . ಕೆ . ಮರಸರ ಹಡಪದ್ ಅವರನ್ನ ಕಾಡಿದ ಹೆಸರಿನ ಅಸ್ತಿತ್ವ
 
 
ನಿಮಗೆ , ನಮಗೆ , ಅವರಿಗೆ , ಇವರಿಗೆ , ಇನ್ನೊಬ್ಬರಿಗೆ , ಮತ್ತೊಬ್ಬರಿಗೆ , ಅವನಿಗೆ , ಅವಳಿಗೆ , ಅದಕ್ಕೆ, ಇದಕ್ಕೆ ಹಾಗೂ ಈ ಪಟ್ಟಿಯಲ್ಲಿ ಸೇರಿಸಬಹುದಾದ ಇನ್ಯಾವುದಕ್ಕೆ ಆಗಲಿ ಎಲ್ಲ ಕಡೆ ಇರುವಂತೆ ಈ ಊರಿನಲ್ಲೂ ಸಹ ಹೆಸರು ಇದ್ದಿತ್ತು ಮತ್ತು ಪ್ರತಿಯೊಬ್ಬರೂ ಇನ್ನೊಬ್ಬರನ್ನು ಒಂದಲ್ಲ ಒಂದು ಹೆಸರಿನಿಂದಲೇ ಕರೆಯುತ್ತಿದ್ದರು , ಕೂಗುತ್ತಿದ್ದರು , ಬೆದರಿಸುತ್ತಿದ್ದರು , ಓಡಿಸುತ್ತಿದ್ದರು , ಆದರಿಸುತ್ತಿದ್ದರು , ಹೊಗಳುತಿದ್ದರು , ತೆಗಳುತ್ತಿದ್ದರು , ಪ್ರೀತಿಸುತ್ತಿದ್ದರು. ಹೆಸರು ಯಾಕೆ ಇರಬೇಕು ಎನ್ನುವದರ ಕುರಿತು ಯಾವತ್ತಿಗೂ ಚರ್ಚೆ ಆಗಿರಲಿಲ್ಲ ಅಥವಾ ಚರ್ಚೆ ಅವಶ್ಯಕ ಎಂದು ಯಾರಿಗೂ ಅನಿಸಿರಲಿಲ್ಲ. ಹೆಸರು ಎನ್ನುವದು ಊರಿನ ಅವಿಭಾಜ್ಯ ಅಂಗವೇ ಆಗಿತ್ತು. ಹೇಗೆ ಜೀವವಿರಲು ಶ್ವಾಸ , ಬಡಿತ , ಆಹಾರ , ನಿದ್ರೆ , ಚಲನೆ ಮುಂತಾದ ಪಟ್ಟಿ ಮಾಡಿದ ಚಟುವಟಿಕೆ ಇದ್ದವೋ , ಹಾಗೆ ಜೀವಕ್ಕೆ ಅಸ್ತಿತ್ವ ಇರಲು ಹೆಸರು ಅನಿವಾರ್ಯವೇ ಆಗಿತ್ತು . ಊರಿನ ಜನ ಜನಕ್ಕೆ ಹೆಸರು ಕೊಟ್ಟಿದ್ದರು , ದನಕ್ಕೆ ಹೆಸರು ಕೊಟ್ಟಿದ್ದರು. ಜನಕ್ಕೆ ಇದ್ದ ಹೆಸರು ಮನಕ್ಕೂ ಇತ್ತು ಜನ ಬೇರೆಯಾಗಿದ್ದರು ಅವರ ಮನ ಬೇರೆಯಾಗಿತ್ತು , ಹೀಗಾಗಿ ಜನರ ಹೆಸರು , ಮನದ ಹೆಸರು ಯಾವತ್ತಿಗೂ ಬೇರೆಯದೇ ಆಗಿರುತ್ತಿತ್ತು , ಅದು ಅನ್ವರ್ಥ ನಾಮವಾಗಿತ್ತು . ಜನ ಜನಕ್ಕೆ ಹೆಸರು ಇಡಲು ಸಂಭ್ರಮಿಸುತ್ತಿದ್ದರು. ಸಣ್ಣ ಜೀವವೊಂದು ಬಾಹ್ಯಕ್ಕೆ ತೆರೆದುಕೊಂಡಾಗ ಜನ ಅದಕ್ಕೆ ಹೆಸರಿಡಲು ಕಾತರಿಸುತ್ತಿದ್ದದು. ಜೀವದ ಜೀವಕ್ಕೆ ಕಾರಣಕರ್ತರು , ಕಾರಣಕರ್ತರ ಸುತ್ತಣ ಕಾರ್ಯಕರ್ತರು ಹೀಗೆ ಎಲ್ಲರು ಸೇರಿಕೊಂಡು ಜೀವದ ಅಸ್ತಿತ್ವವನ್ನು ನಿರ್ಧರಿಸುವ , ಜೀವಕ್ಕೆ ಒಂದು ಹೆಸರು ಕೊಡುವ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು , ಅಸ್ತಿತ್ವವೇ ಇಲ್ಲದ ಹೆಸರಿನಿಂದ ಅಸ್ತಿತ್ವ ಇರುವ ಜೀವರಾಶಿ ಜನಕ್ಕೆ ತನ್ನ ಅಸ್ತಿತ್ವ ಸಾರಬೇಕಿತ್ತು. ಹೀಗಾಗಿ ಹೆಸರು ಎನ್ನುವದು ಅಳಿವು ಮತ್ತು ಉಳಿವಿನ ಪ್ರಶ್ನೆಯೇ ಆಗಿತ್ತು , ಉಳಿವಿನ ಜೊತೆಗೆ ಹೆಸರು ಉಳಿಯುತ್ತಿತ್ತು ಹಾಗು ಕೆಲವೊಮ್ಮೆ ಅಳಿದ ಮೇಲೂ ಹೆಸರು ಅನಂತದಲ್ಲಿ ಲೀನವಾದ ಯಾಂತ್ರಿಕ ಯಂತ್ರದ ಹೆಸರನ್ನ ಜನ ಮನದಲ್ಲಿ ಉಳಿಸಿರುತ್ತಿದ್ದರು . ಹೀಗಾಗಿ ಹಲವು ಬಾರಿ ಅಸ್ತಿತ್ವದ ಮೂಲ ಹೆಸರು ಅಥವಾ ಭೌತಿಕ ದೇಹವೊ ಎನ್ನುವ ಪ್ರಶ್ನೆ ಒಂದಕ್ಕೊಂದು ಸುರುಳಿ ಸುತ್ತಿದ ಕಗ್ಗಂಟಾದ ಜನಿವಾರವೇ ಆಗಿತ್ತು . ಹೆಸರು ಹೊತ್ತ ಕ್ಷಣಿಕ ಭೌತಿಕ , ಭೌತಿಕದ ಮುಖವಾಣಿಯಾಗಿ ಅದರ ಅಸ್ತಿತ್ವವನ್ನು ಜನಕ್ಕೆ ಸಾರುವ ಹೆಸರು .....
.
ಸಾಮಾನ್ಯವಾಗಿ ಹೆಸರನ್ನು ಎರಡು ತೆರನಾಗಿ ವಿಭಾಗಿಸಿದ್ದರು . ಮೊದಲೆನೆಯದು ಜನ್ಮದಿಂದ ಬಂದ ಹೆಸರು ಇನ್ನೊಂದು ಜೀವನದಿಂದ ಬಂದ ಹೆಸರು. ಜನ್ಮದಿಂದ ಬಂದ ಹೆಸರಿನಲ್ಲಿ ಜನ್ಮ ಕೊಟ್ಟವರು ತಮ್ಮ ಕುಲದೇವರ ನೆನಪಿಗೋ ಅಥವಾ ತಮ್ಮ ಹಿರಿಯರ ನೆನಪಿಗೋ ಯಾವುದೋ ಒಂದು ಹೆಸರನ್ನು ಇಟ್ಟು ತಮ್ಮ ಕರ್ತವ್ಯ ಪೂರೈಸುತ್ತಿದ್ದರು. ಹೀಗೆ ಹೆಸರಿಡುವಾಗ ರೂಡಿಯಲ್ಲಿ ಇರುವ ಹಲವಾರು ಹೆಸರುಗಳು ಅಜ್ಜನಿಂದ ಮೊಮ್ಮಗನಿಗೂ , ಅಜ್ಜಿಯಿಂದ ಮೊಮ್ಮಗಳಿಗೂ ಪಿತ್ರಾರ್ಜಿತ ಆಸ್ತಿಯಂತೆ ಹ(ಹೆ)ಸ್ತಾ೦ತರವಾಗಿರುವ ಸಂದರ್ಭಗಳೇ ಜಾಸ್ತಿಯಾಗಿದ್ದವು. ಕೆಲವು ಹೆಸರುಗಳ೦ತೂ ಒಂದು ಕಾಲಚಕ್ರದಲ್ಲಿ ಪದೇಪದೇ ಪುನರಾವರ್ತನೆ ಹೊಂದಿ , ಪ್ರತಿ ಪುನರ್ ಮುದ್ರಣದಲ್ಲೂ ಬೇರೆ ಬೇರೆ ದೇಹವನ್ನು ಪಡೆದು , ಆಯಾ ದೇಹದ ಯಜಮಾನರಿ೦ದ ಆಳಿಸಿಕೊ೦ಡು , ಮತ್ತೆ ಮತ್ತೆ ಕರೆಸಿಕೊಂಡು ಎಲ್ಲರಲ್ಲೂ ಏಕತಾನತೆಯ ಭಾವವನ್ನು ಹುಟ್ಟು ಹಾಕಿ ತಥ್ ಇದೆಂತ ಹೆಸರು ಎಂಬ ಜಿಗುಪ್ಸೆ ಹುಟ್ಟು ಹಾಕಿದ್ದವು. ಇ೦ತ ಹಲವಾರು ಹೆಸರುಗಳು ತಮ್ಮ ವೈಭವದ ದಿನಗಳಲ್ಲಿ ಬಹುವಾಗಿ ಮೆರೆದಿದ್ದರು ಇಂದು ಗಂಗೆ ಎಂಬ ದನವೋ , ಭದ್ರ ಎಂಬ ಕೊಣವೋ , ಟಿಪ್ಪು ಎಂಬ ನಾಯಿಯೋ , ಮಾಳು ಎಂಬ ಬೆಕ್ಕೋ ಆಗಿ ಜೀವನವನ್ನು ಸಾಗಿಸುತ್ತಿದ್ದವು .ಹಲವಾರು ಸನ್ನಿವೇಶಗಳಲ್ಲಿ ನಾಯಿ , ಬೆಕ್ಕಿನ ಯಜಮಾನರು ಬೇರೆಯವರ ಎದುರಿಗೆ ಕಾಳಿ ಎಲ್ಲಿ ಹೊದ್ಯೇ ,ಎಂದೋ ತಥ್ ದರಿದ್ರ ಟಿಪ್ಪು ಎಂದೋ ಕೂಗಿ ಬೈದು ನಿಡುಸುಯ್ದು ಒಂದು ಕ್ಷಣ ಬಂದವರಿಗೆ ಗೊಂದಲ ಉಂಟು ಮಾಡುತ್ತಿದ್ದುದು ಇದೆ, ಆದರು ಸಾಕುಪ್ರಾಣಿಗಳಿಗೆ ಕೊಟ್ಟ ಹೆಸರುಗಳು ಆಯಾ ಯಜಮಾನರ ತೀರಾ ಖಾಸಗಿ ಹೆಸರುಗಳಾಗಿದ್ದರಿ೦ದ , ಊರಿನ ಇತರರಿಗೆ ಕಾಳಿ , ಟಿಪ್ಪು , ಪಂಡು ಮುಂತಾದ ಪ್ರಾಣಿ ನಾಮಧೆಯಗಳು ಅನಾಮಧೆಯಾಗಳಾಗಿಯೇ ಇದ್ದವು . ಹೀಗಾಗಿ ಹೆಸರು ಕೇವಲ ಮನುಷ್ಯನ ಅಸ್ತಿತ್ವದ ಸಾಹಸಕ್ಕೆ ಮಾತ್ರವೇ ಹೊರತು ಬೇರೆ ಯಾವ ಜೀವಕ್ಕೂ ಅಲ್ಲ ಎನ್ನುವದು ಸತ್ಯವಾದ ಮಾತು . ಪ್ರಾಣಿಗಳಲ್ಲಿ ಒಬ್ಬರೊಬ್ಬರ ಪರಿಚಯಕ್ಕೆ ಯಾವುದೇ ಹೆಸರು ಇರುವ ಲಕ್ಷಣಗಳು ಇರಲಿಲ್ಲ . ಹೆಸರಿಲ್ಲದ ಪ್ರಾಣಿಗಳು ತಮ್ಮಲ್ಲೇ ಗುರುಗುಡುತ್ತ , ಪರಚುತ್ತ , ತಿನ್ನುತ್ತ , ಮಲಗುತ್ತ ಇನು ಹಲವಾರು ಕ್ರಿಯೆಗಳಲ್ಲಿ ಭಾಗವಹಿಸಿ ತಮ್ಮ ಅಸ್ತಿತ್ವಕ್ಕಾಗಲಿ , ಹೆಸರಿಗಾಲಿ ತಲೆ ಕೆಡಸಿ ಕೊಳ್ಳದೆ ಹಾಯಾಗಿ ಬದುಕಿದ್ದವು .ಹೆಸರಿಲ್ಲದ ದನ , ಕರು , ನಾಯಿ , ಬೆಕ್ಕು , ಎಮ್ಮೆ , ಕೋಳಿ , ಕೋಣ ಮುಂತಾದ ಪ್ರಾಣಿಗಳು ಹೆಸರಿರುವ ಜನರ ಮನೆ , ಹಿತ್ತಲು , ತೋಟ , ಮರ , ಗದ್ದೆ , ಇತ್ಯಾದಿ ಕಡೆಗಳಿಗೆಲ್ಲ ನುಗ್ಗಿ , ಕೂಗಿ , ಹೊಲಸು ಮಾಡಿ ,ಬೊಗಳಿ , ತಿಂದು , ಮೇಯ್ದು , ಹೊರಳಾಡಿದಾಗೆಲ್ಲ , ಜನ ಆಯಾ ಹೆಸರಿಲ್ಲದ ಪ್ರಾಣಿಗಳ ಹೆಸರಿರುವ ಯಜಮಾನರನ್ನು , ಸರ್ವ ಶಾಪಿತ ಶಬ್ದ ಬಳಸಿ ಬೈಯುತ್ತಿದ್ದರು , ತೆಗಳುತ್ತಿದ್ದರು . ಬೈಯುವ ಕ್ರಿಯೆಗಳಲ್ಲಿ ಜನ ಇನ್ನೊಬ್ಬರ ನಿಜ ಹೆಸರಿನ ಜೊತೆಗೆ ಇನ್ನು ಹಲವಾರು ಹೆಸರುಗಳನ್ನು ಸೇರಿಸುತ್ತಿದ್ದುದು ಇದೆ . ಜನಕ್ಕೆ ಜನ್ಮದಿ೦ದ ಬ೦ದ ಹೆಸರಲ್ಲದೆ , ಬೆಳೆಯುತ್ತ ಬೆಳೆಯುತ್ತ ಹೊದ೦ತೆ ಇನ್ನು ಹಲವಾರು ಹೆಸರುಗಳು ಬರುತ್ತಿದ್ದವು , ಈ ಎಲ್ಲ ಹೆಸರುಗಳು ಅಡ್ಡ ಹೆಸರು ಎ೦ದು ಕರೆಯಲ್ಪದುತ್ತಿದ್ದವು. ಹೀಗೆ ಹುಟ್ಟುವಾಗ ಕೇವಲ ಒಂದು ಹೆಸರು ಮಾತ್ರ ಹೊ೦ದಿದ್ದ ಜನ ಸಾಯುವಾಗ ಹಲವಾರು ಹೆಸರುಗಳನ್ನು ಹೊ೦ದಿರುತ್ತಿದ್ದರು. ಹುಟ್ಟುವಾಗ ಕೇವಲ ಅಮ್ಮ ಎಂಬುದು ಮಾತ್ರ ಗೊತ್ತಿದ್ದರು , ಕೊನೆಯಲ್ಲಿ ಗೊತ್ತಿದ್ದ , ಗೊತ್ತಿಲ್ಲದ ಬೇಕಾದ ಬೇಡದ ಹಲವಾರು ಸ೦ಬ೦ಧಗಳು ಜೊತೆಗೆ ಇರುವಂತೆ , ಅಸಂಖ್ಯ ಸ೦ಬ೦ಧಗಳು ಬೇಕಿದ್ದೋ ಬೇಡದೆಯೋ ಸೇರಿ ಕೊನೆಗೆ ಜನ್ಮದಿ೦ದ ಬ೦ದ ಹೆಸರು ಕೇವಲ ಪುಸ್ತಕದ , ಕಾಗದದ ಹೆಸರು ಮಾತ್ರ ಆಗಿ ಇರುವ೦ತೆ ಭಾಸವಾಗುತಿತ್ತು .
 
ಹೆಸರು ಎನ್ನುವದು ಕೇವಲ ವ್ಯಕ್ತಿಯೊಬ್ಬನ ಅಸ್ತಿತ್ವ ಹಾಗು ಗುರುತಿನ ಭಾಗವಾಗದೇ ಅದು ಈ ಅಪರಿಮಿತ ಜಗತ್ತಿನ ಕಾಲಚಕ್ರದ ಅಗಣಿತ ಪ್ರಭಾವವನ್ನು ವಿವರಿಸುವ ಕಾಲಸೂಚಕವೂ ಆಗಿತ್ತು , ಹೀಗಾಗಿ ಗಣಪತಿ ಎನ್ನುವ ಹೆಸರೊಂದು ತನ್ನ ಜೀವಿತದ ಕಾಲಗಳಲ್ಲಿ ನಾನಾ ರೂಪಗಳನ್ನು ಧರಿಸಿ , ಹುಟ್ಟುವಾಗ ಗಣಪತಿಯೂ , ಬೆಳೆದಂತೆ ಗಪ್ಪತಿಯೂ, ಗೆಳೆಯರ ಜೊತೆ ಗಪ್ಯಾ , ಕಿರಿಯರೊಂದಿಗೆ ಗಪ್ಪಣ್ಣನೂ ಆಗಿ ಕಾಲ ಕಳೆದಂತೆ ಗಪ್ಪತಿ ಹೆಗಡೇರು , ಗಪ್ಪತಿ ಚಿಕ್ಕಪ್ಪ ಮು೦ತಾದ ಅವಸ್ಥೆಗಳನ್ನೆಲ್ಲ ದಾಟಿ ಇತರ ಹೆಸರುಗಳೋ೦ದಿಗೆ ಕ್ರಮಿಸಿ ಜೀವನದ ಗತಿಯೊ೦ದಿಗೆ ಓಡಿ , ಕಾಲನ ನೆನಪಿನ ಸುಕ್ಕುಗಳನ್ನ ಹೊ೦ದಿ ಗಪ್ಪಜ್ಜ ಎ೦ಬ ಹೆಸರನ್ನು ಪಡೆದು ಇಹ ಲೋಕದಿ೦ ಪ್ರಯಾಣ ಮುಗಿಸುತ್ತಿತ್ತು .
 
ಜನ ರೂಪ ಧರಿಸುತ್ತಿದ್ದರು , ಮುಖವಾಡ ಧರಿಸುತ್ತಿದ್ದರು. ಜನ ಜನರಾಗಿ ಯಾರಿಗೂ ಪರಿಚಯವಿರಲಿಲ್ಲ , ಜನ ಜನರಾಗದೆ , ಜನ ಹೆಸರಾಗಿ , ಹೆಸರು ಜನರಾಗಿ , ಜನ ಜನರನ್ನು ಕೇವಲ ಹೆಸರಿನ ಮೂಲಕವೇ ಗುರುತಿಸುವ ಪ್ರಪಂಚದಲ್ಲಿ ಹೆಸರು ಎನ್ನುವದು ಅನಿವಾರ್ಯವಾಗಿತ್ತು